ಕನ್ನಡ

“ದಾರಿ” – ಕುಸುಮಾ ಆಯರಹಳ್ಳಿ

ಅಕ್ಷರವಿಹಾರ_೨೦೨೩

ಕೃತಿ: ದಾರಿ
ಲೇಖಕರು: ಕುಸುಮಾ ಆಯರಹಳ್ಳಿ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು

ಬದುಕಿನ ದಾರಿ…. ಬದುಕುತ್ತಿರುವ ದಾರಿ…. ಬದುಕಿನ ಬಂಡಿ ಸಾಗಿಸಲು ಸವೆಸಬೇಕಾದ ದಾರಿ….ಇದು ನಮ್ಮ ನಿಮ್ಮೆಲ್ಲರ “ದಾರಿ”…‌.
ಬದುಕಿನಲ್ಲಿನ ಹತ್ತು ಹಲವು ದಾರಿಗಳ ಸಾಧ್ಯತೆಗಳನ್ನು,ನಾವು ಆಯ್ದುಕೊಂಡು ಸಾಗಿದ ದಾರಿಯಲ್ಲಿನ ವಿವಿಧ ಮಜಲುಗಳನ್ನು ಹಾಗೂ ಬಣ್ಣಗಳನ್ನು ಯಶಸ್ವಿಯಾಗಿ ಚಿತ್ರಿ‌ಸಿರುವ ಕಾದಂಬರಿ “ದಾರಿ”. ಒಬ್ಬರ ದಾರಿ ಮತ್ತೊಬ್ಬರಿಗಿಂತ ಭಿನ್ನವಾಗಿದ್ದರೂ ಅವು ಕೊಡುವ ಅನುಭವಗಳಲ್ಲಿ ಭಿನ್ನತೆಯ ಜೊತೆಗೆ ಸಾಮ್ಯತೆಯನ್ನು ಹೊಂದಿರುತ್ತದೆ. ಅನೇಕರ ದಾರಿಗಳು ಒಂದಾಗಿ ಕೊನೆಗೆ ಅದುವೇ ವಿಶ್ವಪಥವಾಗುವ ಮೂಲಕ ಒಬ್ಬರ ಬದುಕು ಇನ್ನೊಬ್ಬರದರ ಜೊತೆಗೆ ತಳುಕು ಹಾಕಿಕೊಳ್ಳುವ ಪರಿ ಬೆರಗನ್ನುಂಟುಮಾಡುತ್ತದೆ. ಈ ಸಂದೇಶವನ್ನು ದಾಟಿಸುವಲ್ಲಿ ಕೃತಿಯು ಸಹ ಯಶಸ್ವಿಯಾಗಿದೆ.

ಪ್ರಸ್ತುತ ಕಾದಂಬರಿಯಲ್ಲಿ ಕಥಾನಾಯಕ ಪ್ರಕಾಶ ಇಪ್ಪತ್ತು ವರ್ಷಗಳ ನಂತರ ತಾನು ಮಾಡುತ್ತಿದ್ದ ಪತ್ರಕರ್ತನ ವೃತ್ತಿಯನ್ನು ಬಿಟ್ಟು ತಾನು ಬೆಳೆದ ಹಳ್ಳಿಯಲ್ಲಿ ಏನಾದರೂ ಬದಲಾವಣೆಯನ್ನು ತರಬೇಕೆಂಬ ಉತ್ಸುಕತೆಯಿಂದ ಮರಳುತ್ತಾನೆ. ಅವನ ಪ್ರಜ್ಞೆಯಲ್ಲಿರುವುದು ಇಪ್ಪತ್ತು ವರ್ಷಗಳ ಹಿಂದೆ ಬಿಟ್ಟುಹೋದ ಊರು. ಆದರೆ ಈ ಕಾಲಘಟ್ಟದಲ್ಲಿ ಬಹಳಷ್ಟು ನೀರು ಹರಿದುಹೋಗಿದೆ ಎಂಬುದು ಅವನಿಗೆ ಮನದಟ್ಟಾಗುವುದು ಊರು ಅವನನ್ನು ಒಳಗೆ ಬಿಟ್ಟುಕೊಳ್ಳಲು ನಿರಾಕರಿಸುವಾಗ. ಪ್ರತಿಯೊಂದರಲ್ಲೂ ಜಾತಿ, ರಾಜಕೀಯ ಮತ್ತು ಹಣದ ಹಿಂದೆ ಬಿದ್ದ ಊರಿನ ಜನರಿಂದ ಭ್ರಮನಿರಸನ ಹೊಂದುವ ಪ್ರಕಾಶನಿಗೆ‌ ಅಲ್ಲೊಂದು ಇಲ್ಲೊಂದು ಬೆಳಕಿನ ಕಿರಣಗಳು ಜವರಪ್ಪ ಮಂಗಳೆಯರ ರೂಪದಲ್ಲಿ ದೊರೆಯುತ್ತದೆ. ಜಾಗತೀಕರಣ ಭಾರೀ ಕೈಗಾರಿಕೆಗಳಿಗೆ ತೆರೆದುಕೊಳ್ಳುವ ಊರು, ಆದರ್ಶ ಜೀವನ ಮೌಲ್ಯಗಳಿಗೆ ಬೆನ್ನು ತಿರುಗಿಸುವುದನ್ನು ಕಂಡಾಗ ತಾನು ಆಯ್ದುಕೊಂಡ ದಾರಿಯ ಬಗ್ಗೆ ಅವನಲ್ಲಿ ದ್ವಂದ್ವ ಮತ್ತು ಸಂಶಯಗಳು ಮೂಡುತ್ತವೆ. ಕಾರ್ಪೋರೇಟ್ ಜಗತ್ತು, ನಮ್ಮನ್ನಾಳುವ ಘನ ಸರ್ಕಾರಗಳು ಅಭಿವೃಧ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ನಾಶದ ಕುರಿತು ತೋರುವ ಜಾಣ ಕುರುಡು, ತಮ್ಮ ಸುತ್ತಮುತ್ತಲಿನ ಪರಿಸರ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಧರ್ಮ ದೇವರು ಮುಂತಾದ ವಿಷಯಗಳಿಗೆ ಪ್ರಾಮುಖ್ಯತೆಯನ್ನು ಕೊಡುವ ಜನತೆಯ ಜಡತ್ವವು ಪ್ರಸ್ತುತ ನಮ್ಮ ಸಮಾಜವು ಸಾಗುತ್ತಿರುವ ದಾರಿಗೆ ಹಿಡಿದ ಕನ್ನಡಿಯಂತೆ ಭಾಸವಾಯಿತು.

ಸಮಾಜದಲ್ಲಿ ಆದರ್ಶ ಮೌಲ್ಯಗಳು ಕುಸಿದು ಅವನತಿಯತ್ತ ಸಾಗಿವೆ, ಇನ್ನು ಬದುಕೆಂಬುದು ಅಸಹನೀಯ ಎಂಬ ಭಾವನೆ ಬಲಗೊಳ್ಳುವಾಗ ಚಂದ್ರಣ್ಣ, ಸ್ವಾಮೀಜಿ, ಪುರುಷೋತ್ತಮ ಮತ್ತು ಲೋಕಪ್ಪನವರ ಪಾತ್ರಗಳು ಹೊಸ ಆಶಾಕಿರಣವನ್ನು ಮೂಡಿಸುತ್ತವೆ. ಅವರಂತಹ ವ್ಯಕ್ತಿಗಳಿಂದ ನಡೆಯುತ್ತಿರುವ ನಿಸ್ವಾರ್ಥ ಸಮಾಜ ಸೇವೆಯ ಫಲವಾಗಿ ಎಷ್ಟೋ ಹೊಟ್ಟೆಗಳು ಹೊಟ್ಟೆ ತುಂಬಾ ಉಂಡು ಕಣ್ತುಂಬ ನಿದ್ದೆಯನ್ನು ಮಾಡುತ್ತಿವೆ ಎಂಬುದು ನೂರು ಪ್ರತಿಶತ ಸತ್ಯ. “ಆದರ್ಶಗಳೆಂಬುದು ಪರರ ಉದ್ಧಾರಕ್ಕೆ ಅಲ್ಲ,ನಮ್ಮ ಉದ್ಧಾರಕ್ಕಾಗಿ ಎಂದು ಪಾತ್ರವೊಂದು ನುಡಿಯುವ ಸಾಲು ಸೇವೆಯೆಂಬುದು ಪ್ರದರ್ಶನದ ವಸ್ತುವಾಗಬಾರದು ಎಂಬ ಸೂಕ್ಷ್ಮವನ್ನು ಸಾರುತ್ತದೆ.

ಪ್ರೀತಿ,ಪ್ರೇಮ,ಸ್ನೇಹ,ದಾಂಪತ್ಯ,ಮನಸ್ಸು,ಸರಿ,ತಪ್ಪು ನೈತಿಕತೆ, ಕುಸಿಯುತ್ತಿರುವ ಜೀವನ ಮೌಲ್ಯಗಳು,ಕಾಲಾಂತರಗಳಿಂದ ನಡೆದುಕೊಂಡು ಬಂದ ರೂಢಿಯು ಯೋಚನಾಲಹರಿಗಳಿಗೆ ಪ್ರಯತ್ನಪೂರ್ವಕವಾಗಿ ಹಾಕುವ ಬೇಲಿ,ಪ್ರೀತಿ ಪ್ರೇಮಗಳೆಂಬ ಭಾವಗಳು ಉಂಟು ಮಾಡುವ ದ್ವಂದ್ವಗಳ ಕುರಿತಾದ ಕಾದಂಬರಿಯ ಜಿಜ್ಞಾಸೆಗಳು ಸಂಬಂಧಗಳ ಕುರಿತಾದ ನಮ್ಮ ವಿಚಾರಗಳನ್ನು ಮರುಪರಿಶೀಲಿಸುವಂತೆ ಪ್ರೇರೇಪಿಸುತ್ತವೆ. ಹೊರ ಜಗತ್ತಿಗೆ ಅನ್ಯೋನ್ಯತೆಯಿಂದ ಕಾಣುವ ಗಂಡ ಹೆಂಡಿರ ಸಂಬಂಧಗಳ ನಡುವೆ ಇರುವ ಕಂದಕವನ್ನು, ಅವರುಗಳು ಅನುಭವಿಸುವ ಏಕಾಕಿತನವನ್ನು ಓದುವಾಗ ಹೀಗೂ ಇರಬಹುದೇ ಅನಿಸಿತು. ಬಹುಶಃ ಇನ್ನೊಂದು ಹತ್ತು ವರ್ಷಗಳ ತರುವಾಯ ಈ ಕೃತಿಯನ್ನು ಮತ್ತೊಮ್ಮೆ ಓದಿದರೆ ಯಾವ ಭಾವ ತುಮುಲಗಳನ್ನು ಹೊರಡಿಸಬಹುದು ಎಂಬುದರ ಬಗ್ಗೆ ಕುತೂಹಲವಿದೆ. ಯಾಕೆಂದರೆ ವಯಸ್ಸು ಮನಸ್ಸು ಮಾಗಿದಂತೆ ಕೆಲವೊಂದು ವಿಚಾರಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತವೆ ಅಲ್ಲವೇ…..

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · ವಸುಧೇಂದ್ರ

“ವಿಷಮ ಭಿನ್ನರಾಶಿ” – ವಸುಧೇಂದ್ರ

ಅಕ್ಷರವಿಹಾರ_೨೦೨೩

ಕೃತಿ: ವಿಷಮ ಭಿನ್ನರಾಶಿ
ಲೇಖಕರು: ವಸುಧೇಂದ್ರ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು

ವಸುಧೇಂದ್ರ ನಾನು ಇಷ್ಟಪಡುವ ಲೇಖಕರು. ಅವರ ಬರವಣಿಗೆಯ ಶೈಲಿ ಮತ್ತು ಸರಳ ಭಾಷೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಅವರ ಬರಹಗಳು ತಾಜಾತನದಿಂದ ಕೂಡಿ ಓದುಗರ ಮನೋಲ್ಲಾಸವನ್ನು ದ್ವಿಗುಣಗೊಳಿಸುತ್ತವೆ. ಕಥೆ,ಲಲಿತ ಪ್ರಬಂಧಗಳು ಅಥವಾ ಕಾದಂಬರಿ ಎಲ್ಲಾ ಪ್ರಕಾರಗಳಲ್ಲಿಯೂ ಆಪ್ತ ಶೈಲಿಯ ಬರವಣಿಗೆ ಅವರ ಕೃತಿಗಳಲ್ಲಿ ಕಂಡು ಬರುವ ಧನಾತ್ಮಕ ಅಂಶಗಳು. ಇವು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವವರಿಗೆ ಅನುಕೂಲ. ಎಲ್ಲವೂ ಸರಳ ಕತೆಗಳಾಗಿದ್ದರೂ ಸಹ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿವೆ. ನನಗಿಷ್ಟವಾದ ಕತೆಗಳಲ್ಲಿ ‘ವಾಹಿನಿ’, ‘ವಿಷಮ ಭಿನ್ನರಾಶಿ’ ಪ್ರಮುಖವಾದುವು.

ವಾಹಿನಿ

ಸಾಮಾನ್ಯವಾಗಿ ಯಾರೂ ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳದ ನಿದ್ರಾಹೀನತೆ ಕ್ರಮೇಣ ಹೇಗೆ‌ ಖಿನ್ನತೆಗೆ ತಿರುಗಿ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದು ಕತೆಯ ವಿಷಯ. ಎಷ್ಟೇ ಒತ್ತಡಗಳಿದ್ದರೂ ಅದನ್ನು ಸರಿಯಾಗಿ ಗುರುತಿಸಿ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ಇದು ಸಾಧ್ಯವಾಗದ ಪಕ್ಷದಲ್ಲಿ ತಜ್ಞರ ಸಹಕಾರವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಎಂಬುದು ಕತೆಯ ಸಾರಾಂಶ. ಹಳೆ ಕಾಲದಲ್ಲಿ ವೈದ್ಯಕೀಯ ಸೌಲಭ್ಯಗಳು ಇರದಿದ್ದರ ಕಾರಣ ಖಿನ್ನತೆಯನ್ನು ಗುರುತಿಸಲು ಕಷ್ಟವಾಗುತ್ತಿತ್ತು. ಆದರೆ ಇಂದು ವೈದ್ಯಕೀಯ ಸೌಲಭ್ಯಗಳು ಮುಂದುವರೆದ ಕಾಲದಲ್ಲಿಯೂ ನೆರವನ್ನು ಪಡೆಯಲು ಹಿಂಜರಿಕೆ ತೋರುವುದು ಖೇದಕರ. ಇಷ್ಟೇ ಆಗಿದ್ದರೆ ಅದೊಂದು ಸಾಮಾನ್ಯ ಕತೆಯಾಗಿರುತ್ತಿತ್ತು. ಆದರೆ‌ ಲೇಖಕರು ಇಲ್ಲಿ ರಕ್ತಸಂಬಂಧಗಳ ಎಳೆಯನ್ನು ಬಹಳ ಜಾಣ್ಮೆಯಿಂದ ಬಳಸಿ, ಬಿಟ್ಟರೂ ಬಿಡಲಾಗದ ಬಂಧವೆಂದರೆ ಅದು ರಕ್ತಸಂಬಂಧವೆಂದು ಮಾರ್ಮಿಕವಾಗಿ ನಿರೂಪಿಸುತ್ತಾರೆ.

ವಿಷಮಭಿನ್ನರಾಶಿ

ಸೋದರ ಸಂಬಂಧಿಗಳು ಮದುವೆಯಾದಾಗ ಹುಟ್ಟುವ ಸಂತಾನಗಳಲ್ಲಿನ ವೈಕಲ್ಯತೆಯ ಕುರಿತಾದ ಕತೆ. ಒಂದು ಮನೆಯಲ್ಲಿ ಬುದ್ಧಿಮಾಂದ್ಯ ಮಗುವೊಂದು ಇಡೀ ಕುಟುಂಬದ ಜೀವನೋತ್ಸಾಹವನ್ನು ಕಸಿದುಕೊಳ್ಳುವ ಮೂಲಕ ಮಾನಸಿಕ ಮತ್ತು ಸಾಮಾಜಿಕ ಅಭದ್ರತೆಯ ಭಾವವನ್ನು ಶಾಶ್ವತವಾಗಿಸುತ್ತದೆ. ಆ ಕುಟುಂಬಗಳ ತಾಪತ್ರಯ ಬವಣೆಗಳು ಚೆನ್ನಾಗಿ ಮೂಡಿಬಂದಿವೆ. ಈ ವಿಕಲತೆಗಳಿಗೆ ವೈಜ್ಞಾನಿಕ ಕಾರಣಗಳು ಏನೇ ಇರಬಹುದು, ಆದರೆ ಆತ್ಮಾವಲೋಕನದ ಸಂದರ್ಭವನ್ನು ಸೃಷ್ಟಿಸುವ ಮೂಲಕ ತನ್ನ ತಪ್ಪುಗಳಿಗೆ ಪಶ್ಚಾತ್ತಾಪ ಪಡುವ ಮನುಜ ಸಹಜ ಸ್ವಭಾವವನ್ನು ಅನಾವರಣಗೊಳಿಸಿದ್ದು ಕತೆಗೆ ವಿಶೇಷ ಮೆರುಗನ್ನು ನೀಡಿದೆ.

ಎರಡನೇ ಭಾಗದಲ್ಲಿ ಇರುವ ಮೂರು ಕತೆಗಳು ಸಲಿಂಗ ಕಾಮದ ಬಗೆಗಿನ ಕತೆಗಳು. ನಾವು ಇದುವರೆಗೆ ಯೋಚಿಸಿಯೇ ಇರದ ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ಸಲಿಂಗ ಕಾಮದ ಕುರಿತು ಒಂದು ಬಗೆಯ ತಾತ್ಸರ ಅಥವಾ ಮೂದಲಿಕೆಯನ್ನು ಹೊರತುಪಡಿಸಿ ಅದರಾಚೆಗೆ ನಮ್ಮ ಯೋಚನಾಲಹರಿ ದಾಟುವುದಿಲ್ಲ. “ಸೈಕಲ್ ಸವಾರಿ” ಎಂಬ ಕತೆಯಲ್ಲಿ ಭಿನ್ನ ಲೈಂಗಿಕ ಆಸಕ್ತಿಯನ್ನು ಹೊಂದಿರುವ ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕನೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಎಲ್ಲರಂತೆ ನಾನೇಕೆ ಇಲ್ಲ… ಈ ವಿಷಯದಲ್ಲಿ ನಾನು ಮಾಡಿರುವ ತಪ್ಪೇನು ಎನ್ನುವುದಕ್ಕೆ ಹುಡುಕುವ ಕಾರಣಗಳು, ಸಾಮಾಜಿಕವಾಗಿ ಎಲ್ಲರೆದುರು ಒಪ್ಪಿಕೊಳ್ಳಲಾಗದಂತಹ ಮುಜುಗರದ ಸನ್ನಿವೇಶಗಳ ಜೊತೆಗೆ ಒಂದು ಸಮಾಜವಾಗಿ ನಮ್ಮ ಅಸಡ್ಡೆಯನ್ನು ತೆರೆದಿಡುತ್ತದೆ. “ಚತುರ್ಮುಖ” ಮತ್ತು “ಆಡಬಾರದ ಮಾತುಗಳು ಕಾಡುವಾಗ” ಕತೆಗಳು ಸಹ ಭಿನ್ನ ಲೈಂಗಿಕತೆಯ ಜನರ ಭಾವನಾತ್ಮಕ ಲೋಕವನ್ನು ನಮಗೆ ಪರಿಚಯಿಸುತ್ತದೆ.

ನಮಸ್ಕಾರ,
ಅಮಿತ್ ಕಾಮತ್

ಕನ್ನಡ

“ಚ್ಯುತಿ” – ಶಶಾಂಕ ಪರಾಶರ

ಅಕ್ಷರವಿಹಾರ_೨೦೨೩

ಕೃತಿ: ಚ್ಯುತಿ
ಲೇಖಕರು: ಶಶಾಂಕ ಪರಾಶರ
ಪ್ರಕಾಶಕರು: ಸಮನ್ವಿತ ಪ್ರಕಾಶನ, ಬೆಂಗಳೂರು

ಸರಸ್ವತಿ ‌ಸಿಂಧೂ ನಾಗರಿಕತೆಯ ಅವಸಾನದ ಕಾಲಘಟ್ಟವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಹೆಣೆದ ಕಾದಂಬರಿ “ಚ್ಯುತಿ”. ಮುನ್ನುಡಿಯ ಪ್ರಕಾರ ಈ ಕಥೆ ನಡೆಯುವ ಕಾಲ ಕ್ರಿ.ಪೂ. 2100-2000. ಪ್ರಧಾನವಾಗಿ ಇಷ್ಟು ಪ್ರಾಚೀನ ನಾಗರಿಕತೆಯ ಅವಸಾನದ ಕಾಲದ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಯಲ್ಲಿ ಮನುಷ್ಯನ ಮೂಲಭೂತ ಸ್ವಭಾವಗಳನ್ನು, ಗುಣಾವಗುಣಗಳನ್ನು ಶೋಧಿಸುವುದು ಕೃತಿಯ ವಿಶೇಷ.

ಇಂದಿನ ಪ್ರಜಾಪ್ರಭುತ್ವ ಮಾದರಿಯ ಆಡಳಿತವಿರುವ ಬ್ರಹ್ಮಪುರ ಮತ್ತು ರಾಜ ಪ್ರಭುತ್ವದ ಹೇಮಪ್ರಸ್ಥ ಎಂಬ ಎರಡು ದೇಶಗಳು ಮತ್ತು ಅಕ್ಕಾಡಿಯ ಎಂಬ ದೇಶದ ಜನರ ಜೀವನ ಶೈಲಿ,ಆಚಾರ ವಿಚಾರಗಳು,ಅವರುಗಳ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು,ಆಹಾರ ಪದ್ಧತಿಯ ವಿವರಗಳೊಂದಿಗೆ ಅಂದಿನ ಸಂಸ್ಕೃತಿಯೊಂದು ಓದುಗರ ಮುಂದೆ ಅನಾವರಣಗೊಳ್ಳುತ್ತದೆ. ಇಲ್ಲಿ ಪ್ರಮುಖವಾಗಿ ರಾಜನಿಂದ ಶುರುವಾಗಿ ಸಾಮಾನ್ಯ ಪ್ರಜೆಗಳವರೆಗಿನ ಮನಸ್ಸಿನ ತುಮುಲ ತಲ್ಲಣಗಳನ್ನು ಸಹಜವಾಗಿ ಅಷ್ಟೇ ಶಕ್ತವಾಗಿ ಬಿಂಬಿಸಿರುವುದು ಕೃತಿಯ ಧನಾತ್ಮಕ ಅಂಶ. ಗಂಡು ಹೆಣ್ಣುಗಳ ನಡುವಿನ ಪ್ರೀತಿ, ವಲಸೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ವಲಸೆಯಿಂದಾಗಿ ಮಿಶ್ರ ಸಂಸ್ಕೃತಿಯ ಅಥವಾ ಹೊಸ ಸಂಸ್ಕೃತಿಯ ಪ್ರಾರಂಭ,ರಾಜಕೀಯ ಲಾಭಕ್ಕಾಗಿ ಪ್ರಯೋಗಿಸುವ ತಂತ್ರ ಪ್ರತಿತಂತ್ರಗಳನ್ನು ಓದುವಾಗ ಪ್ರಾಚೀನ ಕಾಲದ ಮನುಜನ ಸ್ವಭಾವ ಮತ್ತು ಇಂದಿನ ಕಾಲದ ಸ್ವಭಾವಗಳು ಏನೇನು ಬದಲಾಗಿಲ್ಲ,ಅದು ಹೊರಮುಖವಾಗಿ ಹರಿಯುವ ರೀತಿಯಲ್ಲಿ ಏನಾದರೂ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೆ ಇರಬಹುದು ಅನಿಸಿತು. ಅದರಲ್ಲಿ ಸಹ ಬ್ರಹ್ಮಪುರದ ಅಸ್ಥಿರತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಶಂಬರ ಉಪಯೋಗಿಸಿಕೊಳ್ಳುವ ಮಾಧ್ಯಮ ಸಾಹಿತ್ಯ ಮತ್ತು ನಾಟ್ಯ ತಂಡ. ಇದನ್ನು ಲೇಖಕರು ಪ್ರಜ್ಞಾಪೂರ್ವಕವಾಗಿ ತಂದಿದ್ದಾರೆ ಎನ್ನುವುದು ನನ್ನ ಅನುಮಾನ. ಒಂದು ಸಮಾಜವನ್ನು ಈ ಮಾಧ್ಯಮಗಳ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ಬಲು ಸುಲಭ.

ಸುಮಾರು ಐದು ಸಾವಿರ ವರ್ಷಗಳ ಕೆಳಗಿನ ನಾಗರಿಕತೆಯ ಕಥೆಯನ್ನು ಇದೀಗ ನಮ್ಮ ಕಣ್ಣಮುಂದೆ ನಡೆದಂತೆ ಚಿತ್ರಿಸುವುದು ಸುಲಭದ ಮಾತಲ್ಲ. ಸರಸ್ವತಿ ಸಿಂಧೂ ನಾಗರಿಕತೆಯ ಉತ್ಖನನದ ಕಥೆಯನ್ನು ನಿರೀಕ್ಷಿಸಿದ್ದ ನನಗೆ ದೊರಕಿದ್ದು ಅಂದಿನ ಮನಸ್ಸುಗಳ ಉತ್ಖನನ. ಇದು ಕೊಂಚ ನಿರಾಸೆಯ ಜೊತೆಗೆ ಅಚ್ಚರಿಯನ್ನುಂಟು ಮಾಡಿತು. ಲೇಖಕರ ಕ್ಷೇತ್ರಾಧ್ಯಯನ,ಸರಳ ಸ್ಪಷ್ಟ ಬರವಣಿಗೆಯ ಶೈಲಿ ಕೃತಿಯನ್ನು ಸರಾಗವಾಗಿ ಓದಿಸಿಕೊಳ್ಳುತ್ತದೆ. (ಕೊಸರು: ಅಲ್ಲಲ್ಲಿ ಹೆಸರುಗಳು ಅದಲುಬದಲಾಗಿ ಕಿರಿಕಿರಿಯಾಗುತ್ತದೆ ಮತ್ತು ಆಕರ ಗ್ರಂಥಗಳ ಪಟ್ಟಿಯನ್ನು ನೀಡಿದ್ದರೆ ಆಸಕ್ತರಿಗೆ ಅನುಕೂಲವಾಗುತ್ತಿತ್ತು)

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · ಗಜಾನನ ಶರ್ಮ

“ಪ್ರಮೇಯ” – ಡಾ. ಗಜಾನನ ಶರ್ಮ

#ಅಕ್ಷರವಿಹಾರ_೨೦೨೩

ಕೃತಿ: ಪ್ರಮೇಯ

ಲೇಖಕರು: ಗಜಾನನ ಶರ್ಮ

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು 

ಜನಮಾನಸದಿಂದ ಕ್ರಮೇಣ ಮಾಯವಾಗಿ ಹೋದ,ಇಂದಿನ ಜನಾಂಗದ ಅರಿವಿನಲ್ಲಿಯೇ ಇರದ ಐತಿಹಾಸಿಕ ಘಟನೆಗಳನ್ನು ಆಧರಿಸಿ ಸತ್ಯಾಂಶಗಳು ಏರುಪೇರಾಗದಂತೆ ಕಲ್ಪನೆಯನ್ನು ಹದವಾಗಿ ಬೆರೆಸಿ ಓದುಗರಿಗೆ ರಸದೌತಣವನ್ನು ಉಣಬಡಿಸುವಲ್ಲಿ ಡಾ.ಗಜಾನನ ಶರ್ಮ ಅವರು ಪ್ರಮುಖರು. ಅವರು ಆಯ್ದುಕೊಳ್ಳುವ ವಿಚಾರಗಳ ಫಲಾನುಭವಿಗಳು ನಾವಾದರೂ ಅದರ ಬಗೆಗಿನ ಮಾಹಿತಿಯ ಕೊರತೆ ಮತ್ತು ಉದಾಸೀನತೆ ದುರದೃಷ್ಟಕರ. ಶರಾವತಿ ವಿದ್ಯುತ್ ಯೋಜನೆಯ ಕುರಿತಾದ “ಪುನರ್ವಸು”, ಇಡೀ ದೇಶವೇ ಹೆಮ್ಮೆ ಪಡಬಹುದಾದಂತೆ ಐವತ್ನಾಲ್ಕು ವರ್ಷಗಳ ಕಾಲ ಪೋರ್ಚಗೀಸರೊಡನೆ ಹೋರಾಡಿದ ದಿಟ್ಟ ಮಹಿಳೆ “ಚೆನ್ನಭೈರಾದೇವಿ”ಯಂತಹ ಕಾದಂಬರಿಯನ್ನು ಕೊಟ್ಟಂತಹ ಶರ್ಮ ಅವರು ಸುಮಾರು ಏಳು ದಶಕಗಳ ಕಾಲ ನಡೆದ ಇಡೀ ಭರತಖಂಡದ “ತ್ರಿಕೋನಮಿತಿ ಮಹಾಮೋಜಣಿ”(ದಿ ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ)ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಕೃತಿ “ಪ್ರಮೇಯ”…

1799ರ ಆಂಗ್ಲೋ ಮೈಸೂರು ಯುದ್ಧದ ನಂತರ ಭಾರತದ ಆಯಕಟ್ಟಿನ ಜಾಗಗಳನ್ನು ಗುರುತಿಸುವ ಮತ್ತು ತೆರಿಗೆ ಸೋರಿಕೆಯನ್ನು ತಡೆಗಟ್ಟುವುದು ಈ ಸರ್ವೆಯ ಪ್ರಾರಂಭಿಕ ಉದ್ದೇಶವಾಗಿತ್ತು. ಇದು ಹಂತಹಂತವಾಗಿ ಮುಂದುವರೆಯುತ್ತಾ ಹೋದಂತೆ ರಾಜಕೀಯ ಲಾಭಕ್ಕಾಗಿ ಇಡೀ ಭಾರತ ದೇಶವನ್ನು ಈಸ್ಟ್ ಇಂಡಿಯಾ ಕಂಪನಿ ನೇತೃತ್ವದ ಸರ್ಕಾರ ಸರ್ವೆಗೆ ಒಳಪಡಿಸಲು ತೀರ್ಮಾನಿಸಿತು. ಇಂತಹ ಲಾಭಗಳಿದ್ದರೂ ಇಂದಿಗೂ ಇದೇ ಸರ್ವೆಯ ರೆಫರೆನ್ಸ್ ಪಾಯಿಂಟುಗಳ ಆಧಾರದ ಮೇಲೆ ಇಂದಿಗೂ ನಮ್ಮ ಕಂದಾಯ ಇಲಾಖೆಯ ಸರ್ವೆಗಳು, ವೈಯಕ್ತಿಕ ಜಮೀನಿನ ಸರ್ವೆಗಳು ಮತ್ತು ಅಳತೆಗಳು ನಡೆಯುವುದು ಎಂಬುದನ್ನು ಗಮನಿಸಿದಾಗ ಇದೊಂದು ಬ್ರಿಟಿಷರು ನಮಗೆ‌ ಕೊಡಮಾಡಿದ ಮಹತ್ವದ ಕೊಡುಗೆ ಎಂದರೆ ಅತಿಶಯೋಕ್ತಿಯಾಗಲಾರದು. 

ಪ್ರಸ್ತುತ ಕಾದಂಬರಿಯ ಕುರಿತು ಹೇಳುವುದಾದರೆ ಸಮಗ್ರ ಭಾರತವನ್ನು ಬ್ರಿಟಿಷರು ಸುಮಾರು ಎಪ್ಪತ್ತು ವರ್ಷಗಳ ಕಾಲ ಅಳತೆ ಮಾಡಿದರು ಎಂಬುದು ಒಂದು ಸಾಲಿನ ಕಥೆ. ಆದರೆ ಈ ಅಳತೆಯ ಬಗ್ಗೆ ಹೇಳುತ್ತಾ ಮನುಷ್ಯನ ಸಹಜ ಗುಣಾವಗುಣಗಳನ್ನು, ಸ್ವಭಾವಗಳನ್ನು ಸಹ ಅಳತೆಗೋಲಿನ ಅಡಿಯಲ್ಲಿ ತರುವ ಮೂಲಕ ವಿಶ್ಲೇಷಿಸುವುದು ಕೃತಿಯ ಹೆಗ್ಗಳಿಕೆ. ಭಾರತದಂತಹ ವಿಶಿಷ್ಟ ಭೌಗೋಳಿಕ ಮೇಲ್ಮೈಯನ್ನು ಹೊಂದಿರುವ,ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯ ದೇಶವನ್ನು ಅಳೆಯುವುದು ಸವಾಲಿನ ಕೆಲಸ. ಸರ್ವೆಯ ಮೊದಲ ಹಂತದಲ್ಲಿ ಸಂಪೂರ್ಣವಾಗಿ ಭಾರತೀಯರನ್ನು ಕಡೆಗಣಿಸಿದ್ದು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಪನಂಬಿಕೆಯನ್ನು ಬೆಳೆಯಲು ಬಿಟ್ಟದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಿಸಿಲು,ಮಳೆ,ಛಳಿ,ಗಾಳಿ ಹಿಮಪಾತ, ಬೆಟ್ಟ ಗುಡ್ಡ ಗಿರಿಕಂದರಗಳನ್ನು ಮೆಟ್ಟಿ ನಿಂತು ಅಳೆಯುವುದು ಅಂದಿನ ಕಾಲಮಾನಕ್ಕೆ ಮೀರಿದ ಸಾಹಸ. ಅದರಲ್ಲಿಯೂ ಮಣಭಾರದ ಅಳತೆಯ ಸಾಧನಗಳನ್ನು ಹೇರಿಕೊಂಡು ವರ್ಷಾನುಗಟ್ಟಲೆ ಮನೆ ಕುಟುಂಬಗಳಿಂದ ದೂರವಿದ್ದುಕೊಂಡು ಪ್ರತಿಕೂಲ ಸನ್ನಿವೇಶಗಳಲ್ಲಿ ಎದುರಿಸಿದ ಸವಾಲುಗಳನ್ನು ನಿಭಾಯಿಸಿದ್ದು ಕಡಿಮೆಯ ಮಾತಲ್ಲ. ಅತೀ ಕಷ್ಟಕರವಾದದ್ದನ್ನು ತಾಳ್ಮೆ, ಶ್ರದ್ಧೆ, ಕರ್ತವ್ಯಪ್ರಜ್ಞೆ, ಬೆಂಬಿಡದೆ ಸಾಧಿಸುವ ಛಲಗಳೇ ಮುನ್ನಡೆಸಿ ಗುರಿ ಮುಟ್ಟಿಸಿದವು ಎಂಬುದು ಸ್ಪಷ್ಟ. ಪ್ರಥಮ ಸ್ವಾತಂತ್ರ್ಯ ‌ಸಂಗ್ರಾಮದ ಆತಂಕದ ಕ್ಷಣಗಳಲ್ಲಿ ಸಹ ಸರ್ವೆಯನ್ನು ನಿಧಾನವಾಗಿಯಾದರೂ ಮುಂದುವರಿಸಿದ್ದು ಈ ಯೋಜನೆಯಲ್ಲಿ ಕೆಲಸ ಮಾಡಿದವರ ಕರ್ತವ್ಯನಿಷ್ಠೆಗೆ ಸಾಕ್ಷಿ.

ಮೊದಮೊದಲು ಭಾರತೀಯರು ಯಾವುದೇ ವೈಜ್ಞಾನಿಕ ಮನೋಭಾವ ಇಲ್ಲದವರು,ಇಂತಹ ಕೆಲಸಕ್ಕೆ ಲಾಯಕ್ಕಿಲ್ಲದವರು ಎಂದು ಭಾವಿಸಿದ್ದರೂ ಬದಲಾದ ಸನ್ನಿವೇಶದಲ್ಲಿ ಅವರನ್ನು ಸೇರಿಸಿಕೊಳ್ಳಬೇಕಾಗುತ್ತದೆ. ರಾಧಾನಾಥ ಸಿಕ್ದರ್, ನೈನ್ ಸಿಂಗ್ ರಾವತ್ ಅವರು ತಮ್ಮಗಳ ಅಗಾಧ ಪ್ರತಿಭೆ ಮತ್ತು ಶ್ರದ್ಧೆಯಿಂದ ಮಹಾಮೋಜಣಿಯ ಮಹತ್ವದ ಹಂತಗಳಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸಿರುವುದನ್ನು ಓದುವಾಗ ಎದೆ ತುಂಬಿ ಬಂದಿತು. ಸರಿಯಾದ ಮಾರ್ಗದರ್ಶನ ದೊರೆತರೆ ಪ್ರತಿಭೆಯೆಂಬುದು ಕಾಲದೇಶಗಳನ್ನು ಮೀರಿ ಹೊಳೆಯುತ್ತದೆ ಎಂಬುದಕ್ಕೆ ಈ ಇಬ್ಬರು ಮಾದರಿ. ಅದರಲ್ಲೂ ನೈನ್ ಸಿಂಗ್ ರಾವತ್ 1580ಮೈಲುಗಳ ಪ್ರದೇಶವನ್ನು ಬರೀ ಕಾಲ್ನಡಿಗೆಯಲ್ಲಿ ಸರಿಸುಮಾರು ಮೂವತ್ತೆರಡು ಲಕ್ಷದಷ್ಟು ಸಮ ಪ್ರಮಾಣದ ಹೆಜ್ಜೆಗಳಲ್ಲಿ ಅಳೆದನು ಎಂದಾಗ ಈ ತರಹವೂ ನಡೆದಿರಬಹುದೇ ಎಂಬ ಸಂಶಯ ಮೂಡಬಹುದು,ಯಾಕೆಂದರೆ ಎಲ್ಲವೂ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಯುವ ಕಾಲದಲ್ಲಿ ನಾವಿರುವುದು ನಮ್ಮ ಊಹೆಯ ಪರಿಧಿಯನ್ನು ಸೀಮಿತಗೊಳಿಸಿರುವುದು.

ಕೃತಿಯ ಇನ್ನೊಂದು ವಿಶೇಷ ಸರ್ವೆ ಎಂಬ ಸಪ್ಪೆ ವಸ್ತುವಿನ ನಡುವೆ ಅಧ್ಯಾತ್ಮದ ಕುರಿತು ಮೂಡಿಬಂದಿರುವ ಜಿಜ್ಞಾಸೆಗಳು‌‌. ಅಧ್ಯಾತ್ಮಕ್ಕೆ ಮತ್ತು ಮನುಷ್ಯ ಸಹಜ ಸ್ವಭಾವಗಳ ಬಗೆಗಿನ ವಿವರಗಳು ಹಾಗೂ ಗಣಿತ ಸೂತ್ರದ ಮೂಲಕ ಮಾಡಲಾದ ಭೂಮಿಯ ಅಳತೆಯ ನಡುವಿನ ವಿವರಗಳನ್ನು ತಾಳೆಹಾಕಿ ಓದುಗರ ವಿವೇಚನೆಗೆ ಬಿಡುತ್ತಾರೆ ಲೇಖಕರು. ಕೆಲವೊಂದು ಜಿಜ್ಞಾಸೆಗಳು ನಮ್ಮ ದೃಷ್ಟಿ ಕೋನವನ್ನು ಬದಲಿಸುವಷ್ಟು ಸಶಕ್ತವಾಗಿವೆ. ಈ ಕಾದಂಬರಿ ಕೇವಲ ಒಂದು ಭೂಮಿಯ ಅಳತೆ ಮಾತ್ರವಲ್ಲ, ನಮ್ಮೊಳಗಣ ಶೋಧನಕ್ಕೆ ಸಹ ದಾರಿಯನ್ನು ತೋರುತ್ತದೆ. ರಾಧಾನಾಥ ಸಿಕ್ದರ್, ನೈನ್ ಸಿಂಗ್ ರಾವತ್, ಮಾಂಟ್ಗೊಮರಿ, ಎವರೆಸ್ಟ್, ಲ್ಯಾಂಬ್ಟನ್ ಮುಂತಾದವರ ಶ್ರಮ, ಶ್ರದ್ಧೆ ಮತ್ತು ಬಲಿದಾನಗಳು ಬಹಳ ಕಾಲದವರೆಗೆ ಕಾಡುವುದು ನಿಶ್ಚಿತ.

ಈ ಕಾದಂಬರಿಯನ್ನು ಓದಿ ಮುಗಿಸಿದಾಗ ನನಗನಿಸಿದ್ದು ಇಷ್ಟು… ಬ್ರಿಟಿಷರು ನಾವಂದುಕೊಂಡಷ್ಟು ಕೆಟ್ಟವರು ಅಲ್ಲ. ಭಾರತೀಯರು ಮುಗ್ಧರು ಅಲ್ಲ. ಅವರದ್ದು ಎಂಬುದು ಎಲ್ಲವೂ ಶ್ರೇಷ್ಠವಲ್ಲ,ನಮ್ಮದೆಲ್ಲವೂ ಕನಿಷ್ಠವಲ್ಲ. ಕೃತಿಯಲ್ಲಿ ಲೇಖಕರೇ ಒಂದು ಕಡೆ ಹೇಳುವಂತೆ ಸಮುದ್ರ ಮಥನದಲ್ಲಿ ಅಮೃತ ಹುಟ್ಟಿದ ಜಾಗದಲ್ಲೇ ವಿಷವೂ ಹುಟ್ಟಿತು. ನಾವು ಯಾವುದಕ್ಕೆ ಪ್ರಾಧಾನ್ಯತೆಯನ್ನು ಕೊಡುತ್ತೇವೆ ಅದೇ ನಮ್ಮೆಲ್ಲರ ಅಭಿಪ್ರಾಯವನ್ನು ರೂಪಿಸುತ್ತದೆ. ನಮ್ಮ ಅಳತೆಯು ಯಾವ ಬಿಂದುವಿನಲ್ಲಿ ನಿಂತು ಯಾವ ಕೋನದಲ್ಲಿ ಅಳೆಯುತ್ತಿರುವೆವು ಎಂಬುದರ ಮೇಲೆ ಅವಲಂಬಿತ. ಅದು ಭೂಮಿಯಾದರೂ ಅಷ್ಟೇ… ಮನುಷ್ಯನ ಗುಣಸ್ವಭಾವಗಳಾದರೂ ಅಷ್ಟೇ…

ನಮಸ್ಕಾರ,

ಅಮಿತ್ ಕಾಮತ್ 

ಕನ್ನಡ · ಜಗದೀಶಶರ್ಮಾ ಸಂಪ

“ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು” – ಜಗದೀಶಶರ್ಮಾ ಸಂಪ

ಅಕ್ಷರವಿಹಾರ_೨೦೨೩

ಕೃತಿ: ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು
ಮಾತು| ಕಥೆ| ಮಾತುಕಥೆ
ಲೇಖಕರು: ಜಗದೀಶಶರ್ಮಾ ಸಂಪ
ಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ ಬೆಂಗಳೂರು

ಶ್ರೀಯುತರ ಎರಡನೇ ಕೃತಿಯನ್ನು ನಾನು ಓದುತ್ತಿರುವುದು. ಪುಸ್ತಕದ ಶೀರ್ಷಿಕೆಯನ್ನು ನೋಡಿದಾಗ ಯಾವುದೋ ಸಂಸ್ಥೆಯ ನಿರ್ವಹಣೆಯ ಕುರಿತಾಗಿ ನೀಡಿದ ಸಲಹೆಗಳು ಅಂತನ್ನಿಸಿದರೂ ಕಥೆಗಳನ್ನು ಒಂದೊಂದಾಗಿ ಓದುತ್ತಿರುವಾಗ ಇದು ಸಂಸ್ಥೆಯೊಂದರ ನಿರ್ವಹಣೆ ಮಾತ್ರ ಅಲ್ಲ ನಮ್ಮ ಆಸೆಗಳು,ಬಯಕೆಗಳು ಆಕಾಂಕ್ಷೆಗಳನ್ನು ಸರಿಯಾದ ಮಾರ್ಗದಲ್ಲಿ ಸಾಕಾರಗೊಳಿಸಿಕೊಳ್ಳಲು, ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಹೇಳಿದ ಕಥೆಗಳು ಎನಿಸಿತು. ಮಹಾಭಾರತದ ಈ ಕಥೆಗಳು ಆಧುನಿಕ ಭಾರತಕ್ಕೆ ಅಂದಿಗಿಂತ ಹೆಚ್ಚು ಅನ್ವಯವಾಗುತ್ತವೆ ಎಂದರೆ ಕೃತಿಯ ಪ್ರಸ್ತುತತೆಯ ಅರಿವಾಗುತ್ತದೆ.

ಯಾವುದೇ ವೃತ್ತಿಯಲ್ಲಿರಲಿ, ಎಷ್ಟೇ ಹೆಸರುವಾಸಿಯಾದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿ, ಆಡಳಿತಾಧಿಕಾರಿಯಾಗಿರಲಿ ಅಥವಾ ಸಾಮಾನ್ಯ ಕೆಲಸದವನಾಗಿರಲಿ ಕೆಲವೊಂದು ಶಿಷ್ಟಾಚಾರವನ್ನು,ಶಿಸ್ತನ್ನು ಪಾಲಿಸಬೇಕು.‌ ಅದು ವ್ಯಕ್ತಿಯ ಮತ್ತು ಸಂಸ್ಥೆಯ ಗೌರವವನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಸಹಾಯಕ. ಅಧಿಕಾರದ ದುರುಪಯೋಗ, ಸ್ವಜನಪಕ್ಷಪಾತ,ಕೆಲಸದಲ್ಲಿನ ನಿರ್ಲಕ್ಷ್ಯ,ಅಸಡ್ಡೆ, ಇನ್ನೊಬ್ಬರ ಅವಕಾಶಗಳನ್ನು ಕದಿಯುವ ಮನೋಭಾವ, ದುರಾಸೆ ಮತ್ತು ಮಹತ್ವಾಕಾಂಕ್ಷೆಗಳು ತಿರುಗುಬಾಣವಾಗುವುದನ್ನು ಕಥೆಗಳ ಮೂಲಕ ವಿವರಿಸುತ್ತಾ, ಕೊನೆಯಲ್ಲಿ ಏನು ಮಾಡಬೇಕಿತ್ತು,ಸರಿಯಾದ ಮಾರ್ಗ ಯಾವುದು ಎನ್ನುವ ಒಳನೋಟಗಳನ್ನು ನೀಡುತ್ತಾರೆ. ಈ ಒಳನೋಟಗಳನ್ನು ವೈಯಕ್ತಿಕ ಜೀವನದಲ್ಲಿಯೂ ಅಳವಡಿಸಿಕೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಏರಬಹುದು. ನಮ್ಮಲ್ಲಿರುವ ಯಾವ ಸಂಪತ್ತು ಪದವಿಗಳು ಶಾಶ್ವತವಲ್ಲ,ಬಂದಷ್ಟೇ ಸಲೀಸಾಗಿ ಅನ್ಯರ ಪಾಲಾಗುತ್ತವೆ ಎಂದು ಹೇಳುತ್ತಾ ಸುಖ-ದುಃಖಗಳ ಬಗ್ಗೆ ನಿರ್ಲಿಪ್ತ ಮನೋಭಾವನೆಯನ್ನು ಬೆಳೆಸಿಕೊಂಡವರು ನಿಜವಾದ ಸುಖಿಗಳು ಎಂಬುದನ್ನು ಹಲವು ಕಥೆಗಳ ಮೂಲಕ ಮತ್ತೆ ಮತ್ತೆ ನಿರೂಪಿಸಿದ್ದಾರೆ.

ಒಟ್ಟಾರೆಯಾಗಿ ವ್ಯಕ್ತಿಯೊಬ್ಬ ಯಾವುದೇ ಹುದ್ದೆಯಲ್ಲಿರಲಿ ಅಥವಾ ಸಾಮಾನ್ಯನೇ ಆಗಿರಲಿ ಒಂದಷ್ಟು ಸಂವೇದನಾಶೀಲತೆ, ಸಮಚಿತ್ತತೆ,ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆಯಂತಹ ಗುಣಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಉನ್ನತಕ್ಕೇರಿಸಿ,ಅವನ ಜೀವನವನ್ನು ತನ್ಮೂಲಕ ಇತರರ ಜೀವನವನ್ನು ಹಸನಾಗಿಸುತ್ತಾನೆ ಎಂಬ ನೀತಿಯನ್ನು ಇಲ್ಲಿನ ಕಥೆಗಳು ಸಾರುತ್ತವೆ. ಭೀಷ್ಮರು ಹೇಳಿದ ನೂರೆಂಟು ಅಣಿಮುತ್ತುಗಳನ್ನು ಪದೇ ಪದೇ ಓದಿ ಮನನ ಮಾಡಿಕೊಂಡರೆ ಸಾಕು ಅವೇ ಮನಸ್ಸಿಗೆ ಬಹಳಷ್ಟು ತಂಪೆರೆಯುತ್ತವೆ. ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನಾಂಗವು ಅವಶ್ಯಕವಾಗಿ ಓದಬೇಕಾದ ಕೃತಿ…

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · ಜಗದೀಶಶರ್ಮಾ ಸಂಪ

“ವಿದುರ” – ಜಗದೀಶಶರ್ಮಾ ಸಂಪ

ಅಕ್ಷರವಿಹಾರ_೨೦೨೩

ಕೃತಿ: ವಿದುರ
ನೀತಿ| ನಿಯತಿ| ನಿಯತ್ತು
ಲೇಖಕರು: ಜಗದೀಶಶರ್ಮಾ ಸಂಪ
ಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ ಬೆಂಗಳೂರು

ಯೂಟ್ಯೂಬ್ ನಲ್ಲಿ ಹೀಗೆ ನೋಡುತ್ತಿದ್ದಾಗ ಗೌರೀಶ್ ಅಕ್ಕಿ ಸ್ಟುಡಿಯೋ ಚಾನೆಲ್ ಅಲ್ಲಿ “ಮಹಾಭಾರತದ ರಹಸ್ಯಗಳು” ಎಂಬ ಕಾರ್ಯಕ್ರಮ ಗಮನಸೆಳೆಯಿತು. ಅದರಲ್ಲಿ ‌ಈ ಕೃತಿಯ ಲೇಖಕರು ಕಥೆಯನ್ನು ಸಾವಧಾನವಾಗಿ ವಿವರಿಸುವ ರೀತಿ ಇಷ್ಟವಾಯಿತು. ಅವರ ಕುರಿತು ಇನ್ನಷ್ಟು ವಿಚಾರಗಳನ್ನು ಹುಡುಕಿದಾಗ ಪುಸ್ತಕಗಳನ್ನು ಬರೆದಿರುವ ಬಗ್ಗೆಯೂ ಮಾಹಿತಿ ದೊರೆಯಿತು. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಅವರ “ವಿದುರ” ಕೃತಿಯ ಅಡಿಬರಹವನ್ನು ನೋಡಿ ಪುಸ್ತಕವನ್ನು ಖರೀದಿಸಿದೆ.

ಸಾಮಾನ್ಯವಾಗಿ ಪುಸ್ತಕವೊಂದನ್ನು ಓದಿ ಮುಗಿಸಿದಾಗ ಯಾವುದಾದರೂ ಒಂದು ಸನ್ನಿವೇಶ,ಪಾತ್ರ ಮನಸ್ಸಿಗೆ ತೀರಾ ಆಪ್ತವಾಗಿ ಬಿಡುವುದು ಸಹಜ. ಆದರೆ ಈ ಪುಸ್ತಕದ ಹೆಚ್ಚುಕಮ್ಮಿ ಎಲ್ಲ ಪುಟಗಳು ಚಿಂತನೆಗಳಿಗೆ ಹೊಸ ರೂಪವನ್ನು ಹೊಸ ದಿಶೆಯನ್ನು ಕಾಣಿಸುವಲ್ಲಿ ಯಶಸ್ಸು ಪಡೆದಿವೆ. ಹಾಗೆಂದ ಮಾತ್ರಕ್ಕೆ ಇಲ್ಲಿರುವುದು ನಮಗೆ ತಿಳಿದಿರುವ ಮಹಾಭಾರತದ ಕಥೆಯೇ ಆದರೂ ನಾವು ಹೆಚ್ಚಾಗಿ ವಿಚಾರಿಸದ ವಿದುರನ ಕಥೆ. ಇಡೀ ಮಹಾಭಾರತದ ಕಥೆಯಲ್ಲಿ ವಿದುರ ಒಬ್ಬ ಸಮರ್ಥ ಆಡಳಿತಗಾರ, ಮೇಧಾವಿ, ನ್ಯಾಯ ನಿಷ್ಠುರತೆಗೆ ಹೆಸರಾದವನು ಎಂಬ ಅಂಶಗಳನ್ನು ಒಪ್ಪಿಕೊಂಡರೂ ಅದರಾಚೆಗೆ ಯೋಚಿಸುವಲ್ಲಿ ನಾವುಗಳು ಎಡವಿದ್ದೇವೆ ಎಂಬುದು ಪುಸ್ತಕವನ್ನು ಓದುತ್ತಿರುವಾಗ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಅವನದ್ದು ವರ್ಣರಂಜಿತ ವ್ಯಕ್ತಿತ್ವ ಅಲ್ಲದ ಕಾರಣ ಇಂದು ಮಹಾಭಾರತದಲ್ಲಿ ಅವನಿಗೆ ಸಿಗುವ ಪ್ರಾಧಾನ್ಯತೆ ನಗಣ್ಯ. ಆದರೆ ಬೇರೆ ಪ್ರಮುಖ ಪಾತ್ರಗಳ ಬಣ್ಣವು ಮಿಂಚುವಲ್ಲಿ ವಿದುರನ ಕೊಡುಗೆ ಅಪಾರ. ಒಂದು ವೇಳೆ ವಿದುರನ ಕೊಡುಗೆ ಇಲ್ಲದೆ ಹೋಗಿದ್ದಲ್ಲಿ ಉಳಿದವರೆಲ್ಲರ ವ್ಯಕ್ತಿತ್ವವೂ ಮಸುಕಾಗಿರುತ್ತಿದ್ದಿತು ಎಂಬ ಮಾತುಗಳು ಅವನ ಪ್ರಾಮುಖ್ಯತೆಯನ್ನು ಸಾರುತ್ತವೆ.

ಪಾಂಡವರ ಸಣ್ಣವರಾಗಿದ್ದನಿಂದಲೂ ಅವರನ್ನು ಎಲ್ಲಾ ಅಪಾಯಗಳಿಂದ ಪಾರು ಮಾಡಿದವನು ಮನಸ್ಸು ಮಾಡಿದ್ದರೆ ಆಗಲೇ ಕೌರವರನ್ನು ಹೆಡೆಮುರಿ ಕಟ್ಟಬಹುದಿತ್ತು. ಆದರೆ ವಿವೇಕಿಯಾದ ಅವನು ಪಾಂಡವರಲ್ಲಿ ಯಾವುದೇ ದ್ವೇಷ ಭಾವನೆಯನ್ನು ಬಿತ್ತದೆ ತಾಳ್ಮೆ ಸಂಯಮದಿಂದ ವರ್ತಿಸುವಂತೆ ಸಲಹೆ ನೀಡುತ್ತಾನೆ. ಅವನಿಗೆ ಹೆಚ್ಚು ಪ್ರೇಮ ಪಾಂಡವರ ಕಡೆಗಿದ್ದರೂ ಇಡೀ ಕುರುಕುಲವನ್ನು ಅಖಂಡವಾಗಿ ಉಳಿಸಬೇಕೆಂಬ ಸದುದ್ದೇಶ ಇತ್ತು. ವಾರಣವತದ ದುರಂತ ಮತ್ತು ದ್ಯೂತದ ಸಮಯದಲ್ಲೂ ವಿದುರನ ವಿವೇಕಭರಿತ ಮಾತುಗಳನ್ನು ಅನುಸರಿಸಿದ್ದಾದರೆ ಮಹಾಭಾರತದ ಕಥೆಯೇ ನಾವು ಇಂದು ಓದುತ್ತಿರುವ ಕಥೆಗಿಂತ ಭಿನ್ನವಾಗಿರುತ್ತಿತ್ತು!! ವಿದುರನ ಪಾಂಡಿತ್ಯಪೂರ್ಣ ಮಾತುಗಳು ಮತ್ತೆ ಮತ್ತೆ ಓದಿಸಿಕೊಳ್ಳುವುದಷ್ಟೇ ಅಲ್ಲ ಜೀವನ ಪಾಠವನ್ನು ಕಲಿಸುತ್ತವೆ. ಅವನಾಡಿದ ಮಾತುಗಳು ಕಲಿಸುವ ಪಾಠ ದುರ್ಯೋಧನಾದಿಗಳಿಗೆ ಮಾತ್ರವಲ್ಲ ನಮಗೂ ಅನ್ವಯವಾಗುತ್ತವೆ. ವಿದುರನು ಹೇಳುವ ಬುಧ್ಧಿಮಾತುಗಳಲ್ಲಿ ಕೆಲವನ್ನಾದರೂ ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ನೆಮ್ಮದಿಯನ್ನು ಮರಳಿ ಪಡೆಯಬಹುದು. ಇದುವರೆಗೆ ಕಂಡು ಕಾಣದಂತಿದ್ದ ವಿದುರನ ವ್ಯಕ್ತಿತ್ವ ಇಲ್ಲಿ ಅನಾವರಣಗೊಂಡಿದೆ. ಸಂಯಮ,ತ್ಯಾಗ ಮತ್ತು ವಿವೇಚನೆ ಎಂಬ ಜೀವನ ಮೌಲ್ಯಗಳು ವ್ಯಕ್ತಿಯೊಬ್ಬನನ್ನು ಎತ್ತರಕ್ಕೆ ಕರೆದೊಯ್ಯುತ್ತವೆ ಎಂಬುದಕ್ಕೆ ವಿದುರನೇ ಸಾಕ್ಷಿ.

ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಲೇಖಕರು ಭಾಷೆಯನ್ನು ಬಳಸಿಕೊಂಡಿರುವ ರೀತಿ. ನಮ್ಮ ಕನ್ನಡ ಭಾಷೆ ಎಷ್ಟೊಂದು ಸರಳ,ಸುಂದರ ಸಮೃದ್ಧ ಎಂದು ಯಾರಿಗೂ ಎನಿಸದಿರದು. ಸ್ಪಷ್ಟ ಮತ್ತು ಶುಭ್ರವಾಗಿ ಮೂಡಿರುವ ವಾಕ್ಯಗಳನ್ನು ಹಾಗೂ ಪದಗಳ ಸಂಯೋಜನೆಗಳನ್ನು ಓದುವುದೇ ಖುಷಿಯ ಸಂಗತಿ. ಓದಿದವರು ಸ್ವವಿಮರ್ಶೆ ಮಾಡಿಕೊಳ್ಳಲು ಪ್ರೇರೇಪಿಸುವ ಮೌಲಿಕ ಕೃತಿ.

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · ಗಿರಿಮನೆ ಶ್ಯಾಮರಾವ್ · Uncategorized

“ಅರಮನೆ ಗುಡ್ಡದ ಕರಾಳ ರಾತ್ರಿಗಳು” – ಗಿರಿಮನೆ ಶ್ಯಾಮರಾವ್

ಅಕ್ಷರವಿಹಾರ_೨೦೨೩

ಕೃತಿ: ಅರಮನೆ ಗುಡ್ಡದ ಕರಾಳ ರಾತ್ರಿಗಳು
ಲೇಖಕರು: ಗಿರಿಮನೆ ಶ್ಯಾಮರಾವ್
ಪ್ರಕಾಶಕರು: ಗಿರಿಮನೆ‌ ಪ್ರಕಾಶನ, ಸಕಲೇಶಪುರ

ಮಲೆನಾಡಿನ ರೋಚಕ ಕತೆಗಳು ಎಂಬ ಸರಣಿಯ ಎರಡನೇ ಕಾದಂಬರಿ “ಅರಮನೆ ಗುಡ್ಡದ ಕರಾಳ ರಾತ್ರಿಗಳು”. ಹೆಸರೇ ಸೂಚಿಸುವಂತೆ ಕಡು ಮಳೆಗಾಲದಲ್ಲಿ ಚಾರಣಕ್ಕಾಗಿ ಕಾಡಿನೊಳಗೆ ಹೋಗಿ ದಾರಿ ತಪ್ಪಿದ ಯುವ ಜೋಡಿಗಳು ಅನುಭವಿಸುವ ಯಾತನೆಯನ್ನು ಈ ಕಾದಂಬರಿಯು ತೆರೆದಿಡುತ್ತದೆ. ದಟ್ಟ ಅಡವಿಯ ಕುರಿತಾದ ಮಾಹಿತಿಯ ಕೊರತೆ, ಅತ್ಯುತ್ಸಾಹ, ತಮಗೇನು ಆಗುವುದಿಲ್ಲ ಎಂಬ ಅಸಡ್ಡೆ, ಪ್ರಾಣಾಪಾಯವನ್ನೂ ಲೆಕ್ಕಿಸದೆ ಸಾಹಸ ಪ್ರವೃತ್ತಿಗೆ ಇಳಿಯುವ ಮನೋಭಾವದ ಯುವ ಜನಾಂಗವು ದುರ್ಗಮವಾದ ಅರಣ್ಯದಲ್ಲಿ ಅನುಭವಿಸುವ ಸಂಕಷ್ಟಗಳನ್ನು ಬಹಳ ಸರಳವಾಗಿ ಅಷ್ಟೇ ಮನೋಜ್ಞವಾಗಿ ತಮ್ಮ ಬಿಗುವಾದ ನಿರೂಪಣೆಯಿಂದ ಓದುಗರ ಮುಂದಿಡುತ್ತಾರೆ ಲೇಖಕರು.

ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ಮನಸೋ ಇಚ್ಛೆ ನೋಡಿ ಆನಂದಿಸಬೇಕೆಂಬ ಅಮಿತ ಉತ್ಸಾಹದಿಂದ ಹೊರಡುವ ಎರಡು ಯುವ ಜೋಡಿಗಳು ಸ್ಥಳೀಯರ ಮುನ್ನೆಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಾಡಿನೊಳಗೆ ಪ್ರವೇಶಿಸುತ್ತಾರೆ. ದೂರದಿಂದ ರಮಣೀಯವಾಗಿ ಕಾಣುವ ಕಾಡಿನ ನಿಗೂಢತೆ ಮತ್ತು ರೌದ್ರತೆಯು ಅವರ ಕಣ್ಮುಂದೆ ನಿಧಾನವಾಗಿ ಅನಾವರಣಗೊಳ್ಳುತ್ತದೆ. ಇನ್ನೇನು ಹೊರಗಡೆ ಬಂದೇ ಬಿಟ್ಟೆವು ಎನ್ನುವಷ್ಟರಲ್ಲಿ ಮತ್ತಷ್ಟು ಒಳಗಡೆ ಸೆಳೆದುಕೊಂಡು ದಿಕ್ಕು ತೋಚದಂತಾಗಿ ಬಸವಳಿದು ತಮ್ಮ ತಪ್ಪಿನ ಅರಿವಾಗುವಷ್ಟರಲ್ಲಿ ಪಶ್ಚಿಮ ಘಟ್ಟದ ಘೋರ ಅರಣ್ಯವಾದ ಅರಮನೆಗುಡ್ಡದ ಬುಡವನ್ನು ತಲುಪುತ್ತಾರೆ. ಒಂದೆಡೆ ಬಿಟ್ಟು ಬಿಡದೆ ಸುರಿಯುವ ಮಳೆ,ದಟ್ಟವಾಗಿ ಆವರಿಸಿರುವ ಮಂಜು, ತಾಳಲಾರದ ಹಸಿವು,ವಿಷ ಜಂತುಗಳು,ಕಾಡು ಪ್ರಾಣಿಗಳ ಭಯ ಅವರನ್ನು ಮತ್ತಷ್ಟು ಹೈರಾಣಾಗಿಸುತ್ತದೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಪರದಾಡುತ್ತಿರುವಾಗ ಹಸಿಮಾಂಸ ಭಕ್ಷಕ ಸೀಳುನಾಯಿಗಳ ಗುಂಪು ಇವರ ಮೇಲೆ ದಾಳಿ ಮಾಡುತ್ತವೆ. ಆಗಲೇ ನಾಗರಹಾವು, ಕಾಡಾನೆಗಳನ್ನು ಕಂಡು ದಿಕ್ಕೆಟ್ಟ ಚಾರಣಿಗರ ಬದುಕುವ ಆಸೆ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ಮುಂದೇನಾಯಿತು…. ಅವರು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಕಾಡಿನಿಂದ ಹೊರಬರುವಲ್ಲಿ ಯಶಸ್ವಿಯಾದರೆ? ಇದಕ್ಕೆ ಉತ್ತರ ಕಾದಂಬರಿ ಓದುವುದು!!!

ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯ ಮತ್ತು ರೌದ್ರತೆಯನ್ನು ಸುಂದರವಾಗಿ ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕಾಡಿನೊಳಗೆ ಸಂಚರಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಎದುರಾಗುವ ಸವಾಲುಗಳ ಕುರಿತು ಚೆನ್ನಾಗಿ ವಿವರಿಸಲಾಗಿದೆ. ಒಂದು ವೇಳೆ ದಾರಿ ತಪ್ಪಿ ಕಾಡಿನೊಳಗೆ ಅಲೆಯಬೇಕಾಗಿ ಬಂದರೂ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವ ಕನಿಷ್ಠ ಜ್ಞಾನ ಇರಬೇಕು,ಇಲ್ಲ ಅಕ್ಷರಶಃ ನರಕದರ್ಶನವಾಗುತ್ತದೆ. ನಾವು ಇವತ್ತು ಪ್ರಕೃತಿಯಿಂದ ಎಷ್ಟು ವಿಮುಖವಾಗಿದ್ದೇವೆ ಎಂದರೆ ಪ್ರಕೃತಿಯಲ್ಲಿ ಯಥೇಚ್ಛವಾಗಿ ಬದುಕುಳಿಯಲು ಬೇಕಾದಂತಹ ಆಹಾರ ದೊರಕುತ್ತಿದ್ದರೂ ಸಣ್ಣಪುಟ್ಟ ಖಾಯಿಲೆಗಳಿಗೆ ಔಷಧಿಗಳು ಸಿಗುತ್ತವೆಯಾದರೂ ಅದನ್ನು ಗುರುತು ಹಿಡಿಯಲು ನಮ್ಮ ತಲೆಮಾರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಖೇದಕರ. ಅದೇ ಕಾಡಿನ ಜೊತೆ ತಾದ್ಯಾತ್ಮವನ್ನು ಮೇಳಾಮೇಳಿಯನ್ನು ಉಳಿಸಿಕೊಂಡಿರುವ ತಲೆಮಾರು ಎಂತಹ ದಟ್ಟ ಅಡವಿಯಲ್ಲಿ ಸಹ ದಾರಿ ತಪ್ಪದೇ ಕ್ಷೇಮವಾಗಿ ಹಿಂತಿರುಗುವುದು ನಮ್ಮ ಮತ್ತು ಪ್ರಕೃತಿಯ ನಡುವೆ ಹೊಂದಾಣಿಕೆಯ ಅಗತ್ಯತೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಸರ್ಕಾರದ ಇಲಾಖೆಗಳ ಮೂಗಿನಡಿಯಲ್ಲಿಯೇ ಕಾಡಿನಲ್ಲಿ ನಡೆಯುವ ದೌರ್ಜನ್ಯಗಳ ಕುರಿತು ಸಹ ಕಾದಂಬರಿ ಕೊಂಚ ಮಟ್ಟಿಗೆ ಬೆಳಕು ಚೆಲ್ಲುತ್ತದೆ.

ಕಾಡು ಎಂದರೆ ಅದು ಬರೀ ಪುಸ್ತಕದಲ್ಲಿರುವ ವಿವರಣೆಯನ್ನು ಓದಿ ಪ್ರಯಾಣಿಸಬಹುದಾದ ತಾಣವಲ್ಲ. ಸರಿಯಾದ ಮಾರ್ಗದರ್ಶನ, ಮುನ್ನೆಚ್ಚರಿಕೆ ಮತ್ತು ರಮ್ಯತೆಗೆ ಮರುಳಾಗದೆ ಮನಸ್ಸನ್ನು ಸದಾ ಹಿಡಿತದಲ್ಲಿಟ್ಟುಕೊಂಡು ಪಯಣಿಸಿದರೆ ನಿಸರ್ಗದ ಸೊಬಗನ್ನು ಸವಿಯಬಹುದು… ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡುತ್ತದೆ ಎಂಬುದು ಕೃತಿಯ ಆಶಯ…

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · ಮನು

“ಮಹಾಸಂಪರ್ಕ” – ಮನು

#ಅಕ್ಷರವಿಹಾರ_೨೦೨೩

ಕೃತಿ: ಮಹಾಸಂಪರ್ಕ

ಲೇಖಕರು: ಮನು(ಪಿ.ಎನ್.ರಂಗನ್)

ಪ್ರಕಾಶಕರು: ಭಾರತೀ ಪ್ರಕಾಶನ,ಸರಸ್ವತಿಪುರಂ ಮೈಸೂರು

ನಾನು ಇದುವರೆಗೂ ಮಹಾಭಾರತವನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಿದ ಸುಮಾರು ಕೃತಿಗಳನ್ನು ಓದಿದ್ದೇನೆ. ಅದರಲ್ಲಿ ಕೆಲವು ಮಹಾಭಾರತದ ವ್ಯಕ್ತಿಗಳು ನಮ್ಮೆಲ್ಲರಂತೆಯೇ ಸಾಧಾರಣ ಮನುಷ್ಯರು ಮತ್ತು ಯಾವುದೇ ಅತೀಂದ್ರಿಯ ಶಕ್ತಿಗಳನ್ನು ಹೊಂದದೆ ಸಹಜ ಮಾನವರಾಗಿ ಬಾಳಿದವರಾದರೆ, ಇನ್ನು ಕೆಲವು ಕೆಲವೊಂದು ಪ್ರಮುಖ ಪಾತ್ರಗಳ ದೃಷ್ಟಿಕೋನದಿಂದ ನಿರೂಪಿತವಾದ ಕೃತಿಗಳು. ಆದರೆ “ಮಹಾಸಂಪರ್ಕ” ಮೇಲಿನ ಎಲ್ಲಾ ಕೃತಿಗಳಿಗಿಂತ ಬೇರೆಯದೇ ದೃಷ್ಟಿಕೋನದಿಂದ ರಚಿತವಾದ ವಿಶಿಷ್ಟವಾದ ಕೃತಿ. ಬಹುಶಃ ಸೃಜನಶೀಲತೆಯ ಪರಾಕಾಷ್ಠೆಯಲ್ಲಿ ಮಾತ್ರ ಇಂತಹ ಕೃತಿಗಳು ಜನ್ಮತಾಳಬಹುದು ಎಂದು ನನಗನಿಸಿತು…

ಬೇರೊಂದು ತಾರಾಮಂಡಲದ ಪೃಥ್ವಿಯಿಂದ ನಮ್ಮಿಂದ ಎಷ್ಟೋ ಬುಧ್ಧಿವಂತರಾದ ಪ್ರಾಜ್ಞರಾದ ಜನರು ಆಕಾಶನೌಕೆಯ ಮೂಲಕ ಭೂಮಿಗೆ ಪಯಣಿಸಿ ಇಡೀ ಭರತಭೂಮಿಯನ್ನು ತಮ್ಮ ಪ್ರಯೋಗಶಾಲೆಯನ್ನಾಗಿಸುವ ಮೂಲಕ ಸಾಧಿಸಿದ “ಮಹಾಸಂಪರ್ಕ”ದ ಫಲವೇ ”ಮಹಾಭಾರತ” ಎನ್ನುತ್ತದೆ ಈ ಕೃತಿ. ಪೃಥ್ವಿಯಿಂದ ಬಂದವರು ನಮಗಿಂತ ಎಲ್ಲಾ ಸ್ತರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದ್ದರು ಮತ್ತು ಅನೇಕ ಅಂಶಗಳಲ್ಲಿ ನಮಗಿಂತ ಅವರು ಉತ್ತಮ ತಳಿಗಳಾಗಿದ್ದರು ಎಂಬುದು ಲೇಖಕರು ಅಂಬೋಣ… ಅವರು ಭೂಮಿಗೆ ಬಂದು ಇಳಿದಾಗ ನಮ್ಮ ಜನರ ಬೌದ್ಧಿಕ ಮತ್ತು ಜೀವನ ಮಟ್ಟ ಕೆಳಸ್ತರದಲ್ಲಿತ್ತು, ಹಾಗಾಗಿ ತಾವು ಸಾಧಿಸಿದ ಸರ್ವಾಂಗೀಣ ತಂತ್ರಜ್ಞಾನದ ಪ್ರಗತಿಯನ್ನು ಬಳಸಿಕೊಂಡು ಅವರು ಇಲ್ಲಿಯ ಜನರು ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದರು ಎಂಬುದು ಕೃತಿಯ ಒಂದು ಸಾಲಿನ ಸಾರಾಂಶ…

ಹಾಗೆಂದು ಸುಖಾಸುಮ್ಮನೆ ಅವರು ತಮ್ಮ ವಾದವನ್ನು ಮಂಡಿಸುತ್ತಾ ಹೋಗುವುದಿಲ್ಲ. ಕೃತಿಯ ಪೂರ್ವಾರ್ಧದಲ್ಲಿ ಅವರು ಎತ್ತುವ ತರ್ಕಗಳಿಗೆ ಇಂದು ನಾವು ಆಧುನಿಕ ಯುಗದಲ್ಲಿ ಸಾಧಿಸಿರುವ ಪ್ರಗತಿಯ ಆಧಾರಗಳನ್ನು ಕೊಡುತ್ತಾರೆ. ಉದಾಹರಣೆಗೆ ಅಂಟಾರ್ಟಿಕಾದ ಹಿಮಕರಡಿಗಳು ತಿಂಗಳುಗಟ್ಟಲೇ ನಿದ್ದೆ ಮಾಡುವ ಮೂಲಕ ತಮ್ಮ ಆಹಾರದ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಂಡು ತೀವ್ರವಾದ ಚಳಿಗಾಲಕ್ಕೆ ಹೊಂದಿಕೊಳ್ಳುವ ತಂತ್ರವನ್ನೇ ಬಳಸಿ ಪೃಥ್ವಿಯ ಜನರು ಆಕಾಶನೌಕೆಯಲ್ಲಿ ದೀರ್ಘ ನಿದ್ರೆಗೆ ಶರಣಾಗಿ ಪಯಣಿಸಿರಬಹುದು ಎನ್ನುತ್ತಾರೆ. ಹಾಗೆಯೇ ದ್ರೌಪದಿಯ ವಸ್ತ್ರಾಪಹರಣ ಪ್ರಕರಣದಲ್ಲಿ ವಿಷ್ಣು ಸಮ್ಮೋಹನಗೊಳಿಸುವಂತಹ ವಿದ್ಯೆ ಅಥವಾ ಅಸ್ತ್ರವನ್ನು ಬಳಸಿ ದ್ರೌಪದಿಯ ಮಾನವನ್ನು ಉಳಿಸಿದ…,ಭೀಷ್ಮ ಜನಿಸುವ ಮೊದಲು ಇತರ ಏಳು ಜನರನ್ನು ನೀರಿನಲ್ಲಿ ಮುಳುಗಿಸಿದ್ದು ದೇವತೆಗಳಲ್ಲಿ ಸಹಜವಾಗಿದ್ದ ನೀರಿನ ಮೇಲೆ ತೇಲುವ ಗುಣ ಇದೆಯೇ ಇಲ್ಲವೇ ಪರೀಕ್ಷಿಸಲು, ಭೀಷ್ಮರು,ದ್ರೋಣರು,ಪಾಂಡವರು,ಕರ್ಣ, ಧೃಷ್ಟದ್ಯುಮ್ನ ದ್ರೌಪದಿ ಮತ್ತಿತರರು, ಪೃಥ್ವಿಯಿಂದ ಪ್ರಯಾಣಿಸಿದ ದೇವತೆಗಳು ಮತ್ತು ಋಷಿಗಳೆಂಬ ಜನಾಂಗವು ಇಲ್ಲಿನ ಮಾನವರೊಂದಿಗೆ ನಡೆದ ಸಂಸರ್ಗದಿಂದ ಜನಿಸಿದವರಾದ್ದರಿಂದ ಅವರು ಇತರ ಮಾನವ ಕುಲದ ಜನರಿಗಿಂತ ಉತ್ತಮ ತಳಿಗಳಾಗಿದ್ದರು ಹಾಗೂ ಇವರು ದೇವತೆಗಳು ಮತ್ತು ಋಷಿಗಳು ಈ ಭೂಮಿಯ ಜನರ ಮೇಲೆ ನಡೆಸಿದ ಪ್ರಯೋಗಗಳ ಫಲವಾಗಿದ್ದರು ಎಂಬ ಅಂಶವನ್ನು ಆಧಾರ ಸಹಿತವಾಗಿ ನಿರೂಪಿಸುವ ಪ್ರಯತ್ನವನ್ನು ಮಾಡುತ್ತಾರೆ.

ಇಲ್ಲಿಯ ಜನರ ಬೌದ್ಧಿಕ ಮಟ್ಟವನ್ನು ಅರಿತುಕೊಂಡು ಭಾಷೆಯ ಲಿಪಿಯನ್ನು ಕಲಿಸದೆ ಕೇವಲ ಬಾಯಿಪಾಠವನ್ನು ಮಾಡುವ ತಂತ್ರವನ್ನು ಬಳಸಿಕೊಳ್ಳುತ್ತಾರೆ. ಆದರೆ ತಲೆಮಾರುಗಳು ಉರುಳಿದ ನಂತರ ಬೌದ್ಧಿಕ ಮಟ್ಟವು ವಿಸ್ತರಿಸುವುದರಿಂದ ಮುಂದೆ ಒಂದು ದಿನ ತಮ್ಮಂತೆಯೇ ಬುಧ್ಧಿವಂತರಾದ ಪೀಳಿಗೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತಮ್ಮ ಎಲ್ಲಾ ಜ್ಞಾನಕೋಶವನ್ನು “ಋಗ್ವೇದ”ದ ಋಕ್ಕುಗಳಲ್ಲಿ ಒಗಟಿನಂತೆ ಸೇರಿಸಿಬಿಟ್ಟರು!. ತಾವು ಸಾಧಿಸಿದ ಅತ್ಯುತ್ಕೃಷ್ಟ ಪ್ರಗತಿಯ ವಿವರಗಳನ್ನು ಇಲ್ಲಿಯ ಜನರಿಗೆ ಕಥೆಯ ರೂಪದಲ್ಲಿ ತಿಳಿಸಿದರು ಹಾಗೂ ಸ್ವಯಂ ಅವರೇ ಕಥೆಯ ಪಾತ್ರದಲ್ಲಿ ಸೇರಿಕೊಂಡು ಜನರು ನಂಬಿಕೆಯನ್ನು ಗಳಿಸಿದರು! ತಮ್ಮ ಪ್ರಯೋಗಗಳಲ್ಲಿ ನಡೆದ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ದೇವತಾ ಸಂತತಿಯನ್ನು ಮುಂದುವರೆಸುವಲ್ಲಿ ವಿಫಲರಾದರು! (ಉದಾ: ಕೃಷ್ಣನ ಮಗ ಸಾಂಬಾ ಮತ್ತು ಉಪಪಾಂಡವರು ಅವರ ಹುಟ್ಟಿಗೆ ಕಾರಣರಾದವರಿಗಿಂತ ಕಡಿಮೆ ಸ್ತರದ ಮಾನವರಾಗಿ ದ್ದರು!!) ಹೀಗೆ ಅನೇಕ ತರ್ಕಗಳನ್ನು ನಮ್ಮ ಮುಂದೆ ಪ್ರಸ್ತುತಪಡಿಸುವ ಲೇಖಕರು, ಇಂತಹ ಒಂದು ಮಹಾಸಂಪರ್ಕದ ಫಲವಾಗಿ ನಮ್ಮ ಇತಿಹಾಸದ ಸಿಂಧೂ ಕಣಿವೆಯ ನಾಗರಿಕತೆ ಇತರ ಸಮಕಾಲೀನ ನಾಗರಿಕತೆಗಳಾದ ಮೆಸೊಪೊಟೆಮಿಯಾ ಈಜಿಪ್ಟ್ ಮತ್ತು ಗ್ರೀಕ್ ನಾಗರಿಕತೆಗಳಿಗಿಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳುತ್ತಾರೆ. ಈ ವಾದಕ್ಕೆ ಸಿಂಧೂ ನಾಗರಿಕತೆಯ ಪ್ರದೇಶದಲ್ಲಿ ಉತ್ಖನನದ ಸಂದರ್ಭದಲ್ಲಿ ದೊರೆತ ಸಾಕ್ಷಿಗಳನ್ನು ಉದಾಹರಿಸುತ್ತಾರೆ!!!…

ಉತ್ತರಾರ್ಧದಲ್ಲಿ ಈ ಪ್ರಯೋಗ ಹೇಗೆ ನಡೆದಿರಬಹುದು ಎಂಬುದಕ್ಕೆ ಇಡೀ ಮಹಾಭಾರತದ ಕತೆಯನ್ನು ವಿವರಿಸುತ್ತಾರೆ. ದೇವತೆಗಳಿದ್ದ ಆಕಾಶನೌಕೆ ಮೊದಲ ಬಾರಿಗೆ ಭೂಮಿಗೆ ಇಳಿದಾಗ ಆ ನೌಕೆಯಿಂದ ಮೊದಲು ಹೊರಗಡಿಯಿಟ್ಟ ವೈವಸ್ವತ ಮನುವಿನ ಮೂಲಕ ವೈವಸ್ವತ ಮನ್ವಂತರ ಆರಂಭವಾಯಿತು!. ಇಡೀ ಮಹಾಭಾರತದ ಕಥೆ ವ್ಯಾಸರ ಕಣ್ಗಾವಲಿನಲ್ಲಿಯೇ ಇತ್ತು ಮತ್ತು ಬೇಕೆನಿಸಿದ ಕಡೆ ಅವರು ಅನೇಕ ಮಾರ್ಪಾಡುಗಳನ್ನು ಮಾಡಿದರು, ಕೆಲವೊಂದು ಸನ್ನಿವೇಶಗಳಲ್ಲಿ ಅವರ ಲೆಕ್ಕಾಚಾರ ತಲೆಕೆಳಗಾಯಿತು,ಸಂಪರ್ಕ ಸಾಧನಗಳ ಮೂಲಕ ದೇವತೆಗಳು ಮತ್ತು ಋಷಿಗಳೊಡನೆ ಅವರು ನಿರಂತರ ಸಂಪರ್ಕದಲ್ಲಿದ್ದು ಪ್ರಯೋಗಗಳನ್ನು ನಿಯಂತ್ರಿಸುತ್ತಿದ್ದರು ಎಂಬುದಾಗಿ ಹೇಳುತ್ತಾರೆ!!!… 

ಇದರಲ್ಲಿರುವ ವಿಚಾರಗಳನ್ನು ನಂಬಬೇಕು ಅಥವಾ ಬೇಡ ಎಂದು ಹೇಳಲಾಗದು. ಆದರೆ ಈ ತರಹ ನಡೆದಿರಬಹುದು ಎಂಬ ಸಾಧ್ಯತೆಯನ್ನು ಕೃತಿಯು ತೆರೆದಿಡುತ್ತದೆ. ಇಂತಹ ಹೊಸ ಹೊಸ ದೃಷ್ಟಿಕೋನದಿಂದ ರಚಿತವಾದ ಕೃತಿಗಳು ನಮ್ಮಲ್ಲಿ ಒಂದು ಪ್ರಶ್ನಿಸುವ ಮನೋಭಾವವನ್ನು ಹುಟ್ಟು ಹಾಕುತ್ತವೆ ಮತ್ತು ಈ ಅಖಂಡ ವಿಶ್ವದಲ್ಲಿ ನಾವೆಷ್ಟು ತೃಣಮಾತ್ರದವರು ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತವೆ…

ನಮಸ್ಕಾರ,

ಅಮಿತ್ ಕಾಮತ್ 

(ಇದೊಂದು 683 ಪುಟಗಳ ಬೃಹತ್ ಕೃತಿ. ನಾನು ಮೇಲೆ ಹೇಳಿರುವ ಉದಾಹರಣೆಗಳಲ್ಲದೇ ಅನೇಕ ತರ್ಕಗಳು ಮತ್ತು ಅದಕ್ಕೆ ಬೇಕಾದ ಸಮಾಧಾನಗಳು ಮತ್ತು ವೈಜ್ಞಾನಿಕ ಆಧಾರಗಳು,ಐತಿಹಾಸಿಕ ಆಧಾರಗಳು, ಇದುವರೆಗೂ ನಡೆದಿರುವ ಅಸಂಖ್ಯಾತ ಸಂಶೋಧನೆಗಳ ಆಧಾರಗಳನ್ನು ಲೇಖಕರು ಇಲ್ಲಿ ಬಳಸಿಕೊಂಡಿದ್ದಾರೆ. ನಿಸ್ಸಂಶಯವಾಗಿ ಎಲ್ಲಾ ಸಾಹಿತ್ಯಾಸಕ್ತರು ಓದಲೇಬೇಕಾದ ಕೃತಿ)

ಕನ್ನಡ · ಪ್ರಭಾಕರ ಶಿಶಿಲ

“ದೊಡ್ಡ ವೀರರಾಜೇಂದ್ರ” – ಡಾ. ಪ್ರಭಾಕರ ಶಿಶಿಲ

ಅಕ್ಷರವಿಹಾರ_೨೦೨೨

ಕೃತಿ: ದೊಡ್ಡ ವೀರರಾಜೇಂದ್ರ
ಲೇಖಕರು: ಡಾ. ಪ್ರಭಾಕರ ಶಿಶಿಲ
ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು

ಈ ಪುಸ್ತಕವನ್ನು ನೋಡುವವರೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ “ಚಿಕವೀರ ರಾಜೇಂದ್ರ” ಪುಸ್ತಕವನ್ನು ಹೊರತುಪಡಿಸಿ ಕೊಡಗಿನ ಇತಿಹಾಸವನ್ನು ತಿಳಿಸುವ ಬೇರೆ ಯಾವುದೇ ಪುಸ್ತಕಗಳ ಬಗ್ಗೆ ಮಾಹಿತಿ ಇರಲಿಲ್ಲ. ಪುಸ್ತಕದ ಹೆಸರಿನಲ್ಲಿ ಸಹ ಸಾಮ್ಯತೆ ಇರುವುದರಿಂದ ಇರಲಿ ನೋಡೋಣ ಎಂದು ಖರೀದಿಸಿದೆ. ಮಾಸ್ತಿಯವರ ಕೃತಿ ಹಾಲೇರಿ ವಂಶದ ಕೊನೆಯ ರಾಜನ ಕಥೆಯಾದರೆ ಈ ಪುಸ್ತಕ ಕೊಡಗು ಸಾಮ್ರಾಜ್ಯವನ್ನು ಶತ್ರುಗಳ ಕೈಯಿಂದ ರಕ್ಷಿಸಿ ವಿಸ್ತರಿಸಿದ ದೊಡ್ಡ ವೀರರಾಜೇಂದ್ರನ ಕಥೆಯನ್ನು ಒಳಗೊಂಡಿದೆ. ಮುನ್ನುಡಿಯಲ್ಲಿ ಪ್ರಸ್ತಾಪವಾಗಿರುವಂತೆ ಲೇಖಕರು ಅವರಿಗೆ ಲಭ್ಯವಾದ ಆಕರಗಳನ್ನು ಪರಿಶೀಲಿಸಿ ತಮಗೆ ಸರಿಯೆಂದು ತೋರಿದ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯನ್ನು ರಚಿಸಿದ್ದಾರೆ. ಅದು ಲೇಖಕನಾಗಿ ಅವರ ಸ್ವಾತಂತ್ರ್ಯ.

ಹಾಲೇರಿ ವಂಶದಲ್ಲಿನ ದಾಯಾದಿ ಕಚ್ಚಾಟವು ಮಿತಿಮೀರಿ ದೊಡ್ಡ ವೀರರಾಜೇಂದ್ರನ ತಂದೆ ಲಿಂಗರಾಜೇಂದ್ರ ಹೈದರ್ ಆಲಿಯ ಬಳಿ ಸಹಾಯಹಸ್ತ ಯಾಚಿಸಿ ಮರಳಿ ಕೊಡಗನ್ನು ಕೈವಶ ಮಾಡಿಕೊಳ್ಳುತ್ತಾನೆ. ಲಿಂಗರಾಜೇಂದ್ರನ ಕಾಲಾನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವನ ಮಕ್ಕಳಾದ ವೀರರಾಜೇಂದ್ರ ಮತ್ತವನ ಪರಿವಾರ ಹೈದರನ ಸೆರೆಯಾಳುಗಳಾಗುತ್ತಾರೆ. ಇಲ್ಲಿಂದ ಮುಂದೆ ದೊಡ್ಡ ವೀರರಾಜೇಂದ್ರ ಅಲ್ಲಿಂದ ತಪ್ಪಿಸಿಕೊಂಡು ಕೊಡಗು ರಾಜ್ಯವನ್ನು ಮತ್ತೆ ವಾಪಾಸು ಪಡೆಯಲು ಪಟ್ಟ ಶ್ರಮ,ಸಾಹಸಗಳು,ಬ್ರಿಟಿಷರ ಕುಟಿಲತೆ, ಸಮಯಸಾಧಕತನದ ಕುರಿತಾದ ವಿವರಗಳಿವೆ. ರಾಜಕೀಯ ಮೇಲಾಟಗಳ ತಂತ್ರಗಾರಿಕೆಯಲ್ಲಿ ಸಿಲುಕಿಕೊಂಡು ದೊಡ್ಡ ವೀರರಾಜೇಂದ್ರ ಬ್ರಿಟಿಷರಿಗೆ ಸಹಾಯ ಮಾಡದೇ ಹೋಗಿದ್ದಲ್ಲಿ ಇತಿಹಾಸವು ಬೇರೆಯೇ ಮಗ್ಗುಲನ್ನು ಪಡೆದುಕೊಳ್ಳುತ್ತಿತ್ತು ಎಂಬುದು ಸುಸ್ಪಷ್ಟ. ಹೈದರ್ ಅಲಿ ಹಾಗು ಟಿಪ್ಪುವಿನ ವ್ಯಕ್ತಿತ್ವದ ಚಿತ್ರಣಗಳನ್ನು ಮತ್ತು ದೇಶಭಕ್ತಿ,ಧರ್ಮ ಸಹಿಷ್ಣುತೆ ಕುರಿತಾದ ವಿವರಗಳನ್ನು ಒಪ್ಪುವುದು ಅಥವಾ ಒಪ್ಪದಿರುವುದು ಓದುಗರಿಗೆ ಬಿಟ್ಟದ್ದು.

ಎಷ್ಟೇ ಸಾಹಸಿಯಾಗಿದ್ದರೂ ಅವನ ಸೌಮ್ಯ ಸ್ವಭಾವ ಮತ್ತು ದಯಾಪರತೆಯು ಅವನಿಗೆ ಅವನತಿಯತ್ತ ದಾರಿ ತೋರಿದವು. ಅವನ ಕಡೆಗಾಲದಲ್ಲಿ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳದೆ ತೆಗೆದುಕೊಂಡ ಕೆಲವು ಅತಿರೇಕದ ನಿರ್ಧಾರಗಳು ಅವನಲ್ಲಿದ್ದ ತಣ್ಣಗಿನ ಕ್ರೌರ್ಯದ ಪರಿಚಯವನ್ನು ಸಹ ಮಾಡಿಕೊಡುತ್ತದೆ. ಕೃತಿಯಲ್ಲಿ ಬಳಸಿರುವ ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳು ಬಹಳ ಅರ್ಥಪೂರ್ಣವಾಗಿ ರಾಜನ ಮನಃಸ್ಥಿತಿಯನ್ನು ಬಣ್ಣಿಸುವಲ್ಲಿ ಸಫಲವಾಗಿವೆ.

ಕಾದಂಬರಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾದಂತೆ ಕಂಡರೂ ಬಿಗುವಾದ ನಿರೂಪಣೆಯು ಅದನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಅದು ಯುಧ್ಧವಿರಬಹುದು ಅಥವಾ ಎರಡು ಬಣಗಳ ನಡುವಿನ ಒಪ್ಪಂದವಿರಬಹುದು, ಎಷ್ಟು ಬೇಕೋ ಅಷ್ಟೇ ವಿವರಗಳನ್ನು ನೀಡಿ ಎಲ್ಲಿಯೂ ಅತಿರಂಜಿತವೆನಿಸದ ಕೃತಿ…

ನಮಸ್ಕಾರ,
ಅಮಿತ್ ಕಾಮತ್

ಕನ್ನಡ · Uncategorized

“ಪರಕಾಯ ಪ್ರವೇಶ” – ರಾಧಾಕೃಷ್ಣ ಕಲ್ಚಾರ್

ಅಕ್ಷರವಿಹಾರ_೨೦೨೨

ಕೃತಿ: ಪರಕಾಯ ಪ್ರವೇಶ
ಲೇಖಕರು: ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ ಬೆಂಗಳೂರು

ಮಹಾಭಾರತ ಮತ್ತು ರಾಮಾಯಣ ಮುಂತಾದ ಪುರಾಣಗಳಲ್ಲಿ ರಾಮ,ಕೃಷ್ಣ,ಸೀತೆ,ಯುಧಿಷ್ಠಿರ ದುರ್ಯೋಧನರ ಹೆಸರು ಎಲ್ಲರಿಗೂ ಚಿರಪರಿಚಿತ. ಅನೇಕ ಸಂದರ್ಭಗಳಲ್ಲಿ ಅವರ ಹೆಸರು ಹಾಗೂ ವ್ಯಕ್ತಿತ್ವದ ಪರಿಚಯ ಹೆಚ್ಚು ಕಮ್ಮಿ ಎಲ್ಲರ ಗಮನವನ್ನೂ ಸೆಳೆದಿರುತ್ತದೆ. ಆದರೆ ಕೆಲವೊಂದು ಪಾತ್ರಗಳು ಇಂದಿಗೂ ಅಪರಿಚಿತವಾಗಿಯೇ ಉಳಿದಿವೆ. ಅದು ಸುಗ್ರೀವನ ಹೆಂಡತಿ ರುಮಾ ಆಗಿರಬಹುದು,ದುರ್ಯೋಧನನ ತಮ್ಮ ವಿಕರ್ಣ ಆಗಿರಬಹುದು ಅಥವಾ ಅವನ ಸಾರಥಿ ಪ್ರಾತಿಕಾಮಿ ಆಗಿರಬಹುದು. ಇವರೆಲ್ಲರೂ ಒಂದಲ್ಲ ಒಂದು ಮಹತ್ವದ ಘಟನೆಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಅಥವಾ ಅಂತಹ ಸನ್ನಿವೇಶಗಳಲ್ಲಿ ಅರಿತೋ ಅರಿಯದೆಯೋ ಅವುಗಳ ಭಾಗವಾಗಿದ್ದಾರೆ.

ದ್ರೌಪದಿಯ ವಸ್ತ್ರಾಪಹರಣ ಪ್ರಕರಣದಲ್ಲಿ ಅದನ್ನು ಬಲವಾಗಿ ವಿರೋಧಿಸಿದ ವಿಕರ್ಣನ ಮನಸ್ಥಿತಿ ಹೇಗಿದ್ದಿರಬಹುದು? ಪದೇ ಪದೇ ದ್ರೌಪದಿಯನ್ನು ಕರೆತರಲು ಹೋದ ಪ್ರಾತಿಕಾಮಿಯ ಮನದಲ್ಲಿ ನಡೆದಿರಬಹುದಾದ ಸಂಘರ್ಷಗಳೇನು? ವಾಲಿಯ ಕಣ್ಮರೆಯ ನಂತರ ಪಟ್ಟಕ್ಕೆ ಬಂದ ಸುಗ್ರೀವ ವಾಲಿಯ ಮಡದಿ ತಾರೆಯನ್ನು ವರಿಸಿದಾಗ ಮತ್ತು ವಾಲಿ ಮರಳಿ ಬಂದು ಸುಗ್ರೀವನನ್ನು ಸೋಲಿಸಿ ಸೇಡಿಗಾಗಿ ರುಮೆಯನ್ನು ಮದುವೆಯಾದ ಸಂದರ್ಭಗಳಲ್ಲಿ ಆಕೆಯ ಮನದಲ್ಲಿನ ಹೊಯ್ದಾಟಗಳೇನಿರಬಹುದು? ಸ್ವತಃ ತಾನೇ ಅತ್ಯುತ್ತಮ ಸಾರಥಿಯಾಗಿ ಹೆಸರು ಪಡೆದಿದ್ದ ಶಲ್ಯನ ರಥದ ಸಾರಥಿಯ ಮನೋಧರ್ಮಗಳು ಕಥೆಯ ರೂಪದಲ್ಲಿ ಚಿತ್ರಿತವಾಗಿವೆ. ಇಲ್ಲಿನ ಪ್ರಸಂಗಗಳು ಹೊಸತಲ್ಲದಿದ್ದರೂ ಹೊಸತೊಂದು ಆಯಾಮದ ಮೂಲಕ ಓದುಗರ ಮುಂದೆ ಅನಾವರಣಗೊಳ್ಳುತ್ತವೆ.

ಉದಾಹರಣೆಗೆ ರಾಮ ಪಟ್ಟಾಭಿಷೇಕದ ನಂತರ ಸೀತೆಯ ಚಾರಿತ್ರ್ಯದ ಕುರಿತು ಎದ್ದ ಅಪಸ್ವರಗಳನ್ನು ರಾಮನ ಗಮನಕ್ಕೆ ತಂದ ಭದ್ರ ಎಂಬ ಗೆಳೆಯನ ಮನಸ್ಥಿತಿಯನ್ನೇ ನೋಡಿ. ಇತರರಂತೆ ತಾನೂ ಅದನ್ನು ಮುಚ್ಚಿಡಬೇಕೋ ಅಥವಾ ಅವನಲ್ಲಿ ಹೇಳಿಕೊಳ್ಳಬೇಕೋ? ಹೇಳಿದರೆ ಆಗುವ ಅನಾಹುತದ ಅರಿವು ಮತ್ತು ಹೇಳದಿದ್ದಲ್ಲಿ ತನ್ನಿಂದಾಗುವ ಅಪಚಾರ, ತನಗೊಪ್ಪಿಸಿದ ಕರ್ತವ್ಯಕ್ಕೆ ಚ್ಯುತಿ ತಂದಂತೆ. ಸವಿವರವಾದ ವರದಿಯನ್ನು ರಾಮನಿಗೊಪ್ಪಿಸಿದ ಬಳಿಕ ತನ್ನಿಂದಾಗಿಯೇ ಸೀತಾ ಮಾತೆ ಮತ್ತೆ ವನವಾಸವನ್ನು ಅನುಭವಿಸಬೇಕಾಯಿತಬೇಕೆಂಬ ಪಾಪಪ್ರಜ್ಞೆ ಒಂದು ಕಡೆ…, ಇಲ್ಲ ತಾನು ತಿಳಿಸದಿದ್ದರೆ ಇನ್ನರಾದರೂ ತಿಳಿಸುತ್ತಿದ್ದರು, ತಾನೊಬ್ಬ ಅಸಹಾಯಕ… ಪರಿಸ್ಥಿತಿಯ ಕೈಗೊಂಬೆ ಎಂಬ ಸಾಂತ್ವನ ಒಂದು ಕಡೆ. ಸೀತೆಯ ದುರದೃಷ್ಟವನ್ನು ಕಂಡು ಮರುಕ ಪಡುವುದು ಮತ್ತು ರಾಮನು ಸೀತೆಯನ್ನು ಕಾಡಿಗಟ್ಟಿದ ಮೇಲೆ ಅನುಭವಿಸುವ ಮೂಕವೇದನೆಯನ್ನು ಕಣ್ಣಾರೆ ಕಂಡು ಹಳಹಳಿಸುವುದನ್ನು ಓದುವಾಗ ಲೇಖಕರ ಸೃಜನಶೀಲತೆ ಮತ್ತು ಸಂವೇದನಾಶೀಲತೆ ತಲೆದೂಗುವಂತೆ ಮಾಡುತ್ತದೆ.

ಪುರಾಣಗಳಲ್ಲಿನ ಮಹತ್ವದ ಘಟನೆಗಳಿಗೆ ಮೂಕಸಾಕ್ಷಿಯಾಗಿದ್ದ ಅನೇಕ ವ್ಯಕ್ತಿಗಳಿಗೆ ದನಿಯಾಗಿದ್ದಾರೆ ಲೇಖಕರು. ಬಲಾಢ್ಯ ವ್ಯಕ್ತಿತ್ವಗಳ ನಡುವೆ ಕಳೆದುಹೋಗಿದ್ದ ಅನಾಮಿಕ ಪಾತ್ರಗಳು ಅನುಭವಿಸಿದ ತಲ್ಲಣಗಳನ್ನು ‌ಓದುಗರ ಮನಮುಟ್ಟುವಂತೆ ಚಿತ್ರಿಸಿದ ಲೇಖಕರಿಗೆ ನಾವು ಅಭಾರಿಯಾಗಿರಲೇಬೇಕು. ಹಾಗೆ ನೋಡಿದರೆ ಈ ಪುರಾಣ ಪಾತ್ರಗಳು ಲೇಖಕರಿಗೆ ತಮ್ಮ ನಮನಗಳನ್ನು, ಧನ್ಯವಾದಗಳನ್ನು ಸಲ್ಲಿಸುತ್ತಿರಬಹುದು!!!… ತಮ್ಮೊಳಗಿನ ತುಮುಲಗಳಿಗೆ ಧ್ವನಿಯಾಗಿದ್ದಕ್ಕೆ…. ಅಕ್ಷರರೂಪ ಕೊಟ್ಟದ್ದಕ್ಕೆ…

ನಮಸ್ಕಾರ,
ಅಮಿತ್ ಕಾಮತ್