ಪುಸ್ತಕ – ಜಸ್ಟ್ ಮಾತ್ ಮಾತಲ್ಲಿ (ಅನುಭವ ಬರಹಗಳು)
ಲೇಖಕರು – ಭಾರತಿ ಬಿ ವಿ
ಬೆಲೆ – 150
ಸಾವಣ್ಣ ಪ್ರಕಾಶನ
ಕವಿತೆಗಳಿಂದ ಬಹುದೂರವೇ ಆದ ನನಗೂ ಭಾರತಿ ಬಿ ವಿ ಅವರ “ಕಿಚನ್ ಕವಿತೆಗಳು” ಕವನ ಸಂಕಲನದ ಬಗ್ಗೆ ಚಂದದ ವಿಮರ್ಶೆ ಓದಿ ಕೊಳ್ಳುವ ಬಯಕೆಯಾಗಿತ್ತು.
ಬೇಕಾದಷ್ಟು ಪುಸ್ತಕಗಳು ಬಂದು ನನ್ನ ತೆಕ್ಕೆಗೆ ಬಿದ್ದಿದ್ದರೂ ಇದೊಂದು ಮಾತ್ರ ಕೈಸೇರದೇ ಅದೇಕೋ ಮುಖ ತಿರುಗಿಸಿಕೊಂಡು ಮಗುಮ್ಮಾಗಿ ಕುಳಿತುಬಿಟ್ಟಿತ್ತು.
ಸರೀ… ಆದಾಗ ಬಾರೇ ಸುಂದರಿ, ನಿನಗಾಗಿ ಕಾಯ್ತಿರ್ತಿನಿ ಅಂತ ಸಮಾಧಾನ ಮಾಡಿಕೊಂಡಿದ್ದೆ.
ಆದಿತ್ಯವಾರದ ಒಂದಿಷ್ಟು ಶಾಪಿಂಗ್ ಮುಗಿಸಿಕೊಂಡು ಗಡದ್ದಾಗಿ ಊಟ ಮುಗಿಸಿ ಹೊರಡುವಾಗ ನನ್ನ ಮಗಳದ್ದು ಒಂದೇ ಸಮ ಕರ್ಕರೆ.. ಅವಳ ಶಾಲೆಯಲ್ಲಿ ರಜತಮಹೋತ್ಸವದ ನಿಮಿತ್ತ ನಾಲ್ಕು ದಿನಗಳ ಭಾರೀ ಕಾರ್ಯಕ್ರಮ!! ಹೋಗುವ ಮನಸ್ಸಿಲ್ಲದಿದ್ದರೂ ಅವಳಿಂದ ತಳ್ಳಿಸಿಕೊಂಡಂತೆ ಹೋಗಬೇಕಾಯಿತು. ನನ್ನ ಗೊಣಗುವಿಕೆಗೆ ಸೊಪ್ಪುಹಾಕದೇ ಅಪ್ಪನ ಕೈಹಿಡಿದು ಕುಣಿಯುತ್ತ ನಡೆದಳು.
ಪುಟ್ಟ ಮಕ್ಕಳು ನೃತ್ಯ ರೂಪಕವನ್ನೇನೋ ಮಾಡುತ್ತಿದ್ದರು. ವ್ಹಾ.. ಭಾರಿ ಚಂದ ಮಾಡ್ತಿದ್ದ ಮಾರ್ರೇ.. ಎನ್ನುತ್ತಲೇ ಸುತ್ತು ನೋಡಿದರೆ ಒಂದಿಷ್ಟು ಸ್ಟಾಲ್ಗಳು ಬಂದಿದ್ದವು.. ಅದರ ನಡುವೆ ಅನಾಥ ಶಿಶುಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿರುವ ಎರಡು ಪುಸ್ತಕ ಮಳಿಗೆಗಳು!!
ಅವುಗಳನ್ನು ಕಂಡಿದ್ದೇ ಅಪ್ಪ, ಮಗಳಿಗೆ ನಿಲ್ಲಲೂ ಕೊಡದೇ ಒಂದೇ ಸಮ ಹಠ ಮಾಡಿ ಅತ್ತ ಎಳೆದೋಯ್ದೆ.. ಬೇಕಾದ ಪುಸ್ತಕಗಳನ್ನು ಕಂಡಾಗ ಸ್ವರ್ಗ ಅದೇ ಸ್ಟಾಲಲ್ಲಿ ಕಾಲು ಮುರಿದು ಕುಳಿತಿದೆಯೇನೊ ಅನ್ನಿಸಿತು.
ಪುಸ್ತಕ ರಾಶಿಯ ನಡುವೆ ಕದ್ದು ನೋಡುತ್ತಿದ್ದ ಇದನ್ನು ಕಂಡಾಗ ಎಲ್ಲೋ ನೋಡಿದ ನೆನಪು!! ಎಚ್ಚರಿಸುವಂತೆ ಥಟ್ಟನೆ ಕೆನ್ನೆಗೆ ಬಾರಿಸಿದ್ದು ಮತ್ತದೇ ಮುನಿಸಿಕೊಂಡ ಚೆಲುವೆ ಕಿಚನ್ ಕವಿತೆಗಳು ಪುಸ್ತಕ!
ಇದು ಅದಲ್ಲದಿದ್ದರೂ ಅಕ್ಕನನ್ನು ಬಯಸಿದಾಗ ತಂಗಿ ಸಿಕ್ಕಂತಾಯಿತು.. ಅಲ್ಲಿ ನಾಲ್ಕೈದು ಕಾಪಿಗಳಿದ್ದರೂ, ಮತ್ತ್ಯಾವ ಕೈ ಆ ಕ್ಷಣಕ್ಕೆ ಕೊಳ್ಳುವ ಆಸಕ್ತಿ ತೋರದಿದ್ದರೂ ಆತುರಗೆಟ್ಟು ಬಾಚಿಕೊಂಡೆ.
ನನ್ನೆಲ್ಲಾ ಈ ಎಡಬಿಡಂಗಿತನವನ್ನು ಓರೆಗಣ್ಣಲ್ಲಿ ನೋಡುತ್ತಿದ್ದ ಮಗಳು, ಇಲ್ಲಿ ಬಂದದ್ದೇ ತಪ್ಪು ಎಂದುಕೊಂಡಿರಲಿಕ್ಕೂ ಸಾಕು..
ಒಂದು ಬಾರ್ಬಿ ಡಾಲ್ ಕೊಡಿಸಮ್ಮ ಎಂದಾದಲೆಲ್ಲಾ ಮನೆಯಲ್ಲಿ ಒಂದ್ರಾಶಿ ಬಿದ್ದಿವೆ.. ಸಾಕು ಸುಮ್ಮನಿರೆ ಎಂದು ಗದರುವ ಈ ಅಮ್ಮಾ, ಅಷ್ಟು ಪುಸ್ತಕಗಳಿದ್ರೂ ತಾನು ಮಾತ್ರ ಮತ್ತೆ ತಗೊಳ್ತಾಳೆ. ಅಪ್ಪನ ಮುಂದೆ ದೂರು!!
ಮನೆಯವರದ್ದೂ ಯಥಾಪ್ರಕಾರ ಜೇಬಿಗೆ ಕತ್ತರಿ ಬಿದ್ದಾಗಿನ ನಿರ್ಲಿಪ್ತಿತನ..
ಆಟೋ ಎಂದರೆ ಸಾಕು ಅಚ್ಚರಿ ಪಡುವ ಬಾಲ್ಯ ನಮ್ಮದು. ಓಣಿಯಲ್ಲಿ ಯಾರಿಗಾದರೂ ತುರ್ತಾಗಿ ಆಟೋ ಬೇಕಿದ್ದರೆ, ಆಟೋದವರನ್ನು ಕರೆತರಲು ನಮ್ಮನ್ನು ಅಟ್ಟುತಿದ್ದರು. ಸ್ಟ್ಯಾಂಡಿನಿಂದ ಮನೆಯವರೆಗೆ ಆಟೋ ಹತ್ತಿ ಕರೆದುಕೊಂಡು ಬರುವ ಸಂಭ್ರಮ ಹೇಳತೀರದ್ದು.
ಆದರೆ ಆ ಸಂಭ್ರಮ ಬಹುಕಾಲ ದಕ್ಕಲೇ ಇಲ್ಲ. ಇವರು ಹೇಳುವ ಪುಡಿಗಾಸಿಗೆ ಬರಲೂ ಆಗದೇ ಅತ್ತ ಸ್ಟ್ಯಾಂಡಿನಲ್ಲಿ ತಮ್ಮ ಪಾಳಿ ಕಳೆದುಕೊಳ್ಳುವ ಭೀತಿಗೆ ದೊಡ್ಡವರ ಹೊರತು ನಾವು ಕರೆಯ ಹೋದರೆ ಬರುತ್ತಿರಲಿಲ್ಲ.
ಮದುವೆಯ ನಂತರ ಆಟೋದ ಓಡಾಟಗಳೆಲ್ಲ ಸಾಮಾನ್ಯವಾದ ಮೇಲೆ ಆಟೋಗಳ ಪ್ರಯಾಣಗಳ ಬಗ್ಗೆ ಇದ್ದ ಸುಪ್ತ ಖುಷಿ ಮಾಯವಾದವು. ಆದಷ್ಟು ಕಡಿಮೆ ಬೆಲೆಗೆ ಚೌಕಾಸಿ ಮಾಡಿ ಹತ್ತುವ ಪರಿಪಾಠಗಳು ಅರಿವಿಗೆ ಬರದಂತೆ ಬದುಕಿಗೆ ಲಗ್ಗೆ ಇಟ್ಟಾಗಿತ್ತು.
ಕಷ್ಟವಾದರೂ ಆಟೋ ಹತ್ತದೇ ಬಸ್ಸಿಗೆ ಬಂದು ನೂರು ರೂಪಾಯಿ ಉಳಿಸಿದೆ ಎಂಬ ವಿಕ್ಷಿಪ್ತ ಹೆಮ್ಮೆಗೆ, ಅದಕ್ಕಿಂತಲೂ ಹೆಚ್ಚು ಬೆಲೆ ಕೊಟ್ಟು ಕೊಂಡ ಅಂಗೈ ಅಗಲದ ಚಾಕ್ಲೇಟುಗಳು ಬ್ಯಾಗಲ್ಲಿ ಮುಸಿಮಸಿ ನಗುತ್ತಿರುವುದು ಗೊತ್ತೇ ಆಗುತ್ತಿರಲಿಲ್ಲ. ಅಗತ್ಯವಿಲ್ಲದ ಕಡೆ ಸುರಿದು, ಇನ್ನೆಲ್ಲೋ ಚೌಕಾಸಿ ಮಾಡಿ ನಮ್ಮ ಜಾಣತನಕ್ಕೆ ನಾವೇ ಬೆನ್ನುತಟ್ಟಿಕೊಂಡು ಬೀಗುವುದು
ಮನುಷ್ಯನ ಸಾಮಾನ್ಯ ವಿಕೃತಿಗಳೇನೋ!!
ಆಟೋ ಹತ್ತಿ ಕುಳಿತದ್ದಷ್ಟೇ ನೆನಪು ಮೊಬೈಲಿನ ಪ್ರಪಂಚದಲ್ಲಿ ಎಲ್ಲವೂ ಮರಿವೆ. ಗೇಟಿನ ಮುಂದೆ ಆಟೋ ನಿಲ್ಲಿಸಿ ಮೇಡಂ ಇದೇ ತಾನೆ ಎಂದಾಗ ತಲೆಯ ಮೇಲೆ ಮೊಟಕಿದಂತೆ ಎಚ್ಚೆತ್ತು ಎಲ್ಲಿದ್ದೇನೆ ಎಂಬ ಆತಂಕದಲ್ಲಿ, ಹಾ… ಅಲ್ಲ, ಹೌದು.. ಎನ್ನುವಾಗ ಅವರು ಮುಗುಳು ನಗುತ್ತ ಕಳೆದ ಬಾರಿ ನನ್ನ ಆಟೋ ಹತ್ತಿದ್ರಿ ಮೇಡಂ ಎಂದಾಗ ಪೆಚ್ಚಾಗಿ ಹಲ್ಲುಕಿರಿದು ಹೌದೌದು ಎನ್ನುತ್ತ ಅವರು ಕೇಳಿದಷ್ಟು ಮರುಮಾತಾಡದೇ ಕೊಟ್ಟು ಇಳಿದು ಬಿಡುವ ದಿನಗಳೆಷ್ಟೋ.. ಅಸಲಿಗೆ ನಾನು ವಿಳಾಸ ಹೇಳಿದ್ದೇನಾ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ.
ಕರಾವಳಿ, ಮಲೆನಾಡುಗಳ ಬಗ್ಗೆ ಗೊತ್ತಿರಬಹುದು ನಿಮಗೆ. ತೋಟ, ಬೇಣಗಳ ನಡುವೆ ವಿರಳವಾಗಿ ಕಾಣುವ ಮನೆಗಳು. ಹಗಲಿಗೇ ನಿರ್ಜನವಾಗಿ ಆತಂಕ ಹುಟ್ಟಿಸುವಂತಿದ್ದರೆ, ರಾತ್ರಿಯಂತೂ ಇರುವ ಕತ್ತಲನ್ನೆಲ್ಲಾ ಹೊದ್ದು ಮಲಗಿರುತ್ತವೆ. ಮಿಣುಕು ಹುಳುಗಳು ಮತ್ತು ಅದಕ್ಕಿಂತಲೂ ಕ್ಷೀಣವಾಗಿ ಕಾಣುವ ದೂರದಲ್ಲಿರುವ ಮನೆಗಳ ದೀಪಗಳಷ್ಟೇ ಧೈರ್ಯ ತಂದುಕೊಡಬೇಕು.
ಗೇಟಿಗೂ ಮನೆಗೂ ಎತ್ತಣೆತ್ತಣ ಸಂಬಂಧ! ಎನ್ನುವಂತಿರುತ್ತವೆ. ಕತ್ತಲಲ್ಲಿ ಮಲಗಿರುವ ಹೆಬ್ಬಾವಿನಂತ ಕಾಲುದಾರಿಯೇ ಮನೆ ತಲುಪಿಸುವುದು.
ತೀರಾ ಅನಿವಾರ್ಯವಾದಾಗ ಮಾತ್ರ ರಾತ್ರಿ ಆಟೋ ಹತ್ತಿ ಬರಬೇಕಾಗುತ್ತದೆ. ಒಂಟಿಯಾಗಿರುವುದರ ಜೊತೆಗೆ ಅಪರಿಚಿತ ಆಟೋ ಎಂಬ ಭಯ. ಪ್ರತಿ ತಿರುವನ್ನು ಅವನು ಸರಿಯಾಗಿ ತೆಗೆದುಕೊಳ್ಳುತ್ತಿದ್ದಾನಾ ಎಂಬ ಪರೀಕ್ಷೆ ಬಾರಿ ಬಾರಿಗೂ. ಗೇಟು ಕಂಡಾಗ ಜೀವ ವಾಪಸ್ಸಾದ ದೀರ್ಘ ಉಸಿರು. ಇಂತಹ ಆತಂಕಗಳಿಗೆ ನಾಚಿಕೆ ತರಿಸುವಂತೆ ನಾನು ಹೋಗಬೇಕಾದ ಹಾದಿಗೆ ತಮ್ಮ ಹೆಡ್ಲೈಟ್ ಫೋಕಸ್ ಮಾಡಿ ನೀವು ಹೋಗಿ ಮೇಡಂ ಎನ್ನುತ್ತ ನಿಮಿಷಗಳವರೆಗೆ ನಿಲ್ಲುವ ಆಟೋದವರನ್ನು ಕಂಡಾಗ ಏನೂ ಹೇಳಲಾಗದ ಆರ್ದ್ರಭಾವ ಆವರಿಸಿಕೊಳ್ಳುತ್ತದೆ.
ಆಟೋ ಹತ್ತಿ ವಿಳಾಸ ಹೇಳುವ ಮೊದಲೇ ಪರಿಚಿತ ನಗು ಬೀರುತ್ತ ಎಲ್ಲಿಗೆ ಮೇಡಂ ಮನೆಗಾ? ಅಂಗಡಿಗಾ ಎನ್ನುತ್ತಾ ಅಚ್ಚರಿಗೆ ತಳ್ಳುವವರೆಷ್ಟೋ. ಅರೇ.. ನಮ್ಮ ಅಂಗಡಿ, ಮನೆ ಈವನಿಗೇಗೆ ಗೊತ್ತು? ಸಣ್ಣ ಊರೇ ಆಗಿರಬಹುದು. ಆದರೆ ಇಷ್ಟೆಲ್ಲಾ ನೆನಪಿಡುವ ಅಗತ್ಯ ಅವರಿಗೇನಿದೆ?
ನಮಗೆ ಆಟೋ ಒಂದು ಸೌಲಭ್ಯವಷ್ಟೇ ಆದರೆ, ಅವರಿಗೆ ಪ್ರಯಾಣಿಕರೇ ಜೀವಾಳ.
ಇವೆಲ್ಲ ನಮಗೆ ಎದುರಾಗುವ ಮೇಲ್ನೋಟದ ಅನುಭವಗಳಷ್ಟೇ. ಇದಕ್ಕಿಂತಲೂ ಭಿನ್ನವಾದ, ಸಾಮಾನ್ಯವಾಗಿ ನಾವು ಕಂಡುಕೊಳ್ಳದ ವಿಷಯಗಳನ್ನು ಭಾರತಿ ಬಿ. ವಿ ಅವರು ತಮ್ಮ “ಜಸ್ಟ್ ಮಾತ್ ಮಾತಲ್ಲಿ” ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಎಲ್ಲರೊಳಗೂ ಒಂದು ಸುಪ್ತ ಜಗತ್ತಿದೆ. ಅದು ಅಗಾಧವಾದ ಕೋಟೆಯೇನಲ್ಲ. ಯಾರದೋ ಸಣ್ಣದೊಂದು ಸಹಾನುಭೂತಿಯ ಉಸಿರಿಗೆ ಕದ ತೆರೆದು ಬೆತ್ತಲಾಗುವಂತದ್ದು. ಅದರೊಳಗೆ ಇಣುಕಿ ತೆವಳುತ್ತಿರುವ ಸಾಕಷ್ಟು ಕಥೆಗಳನ್ನು ಕಂಡುಕೊಳ್ಳುವುದು ಎಷ್ಟು ಜನರಿಗೆ ಸಾಧ್ಯ?
ಲೇಖಕಿಗಾದ ಅನುಭವಗಳು ಎಲ್ಲರಿಗೂ ಯಾಕೆ ಆಗುವುದಿಲ್ಲ? ನಮ್ಮ ಜಂಜಡಗಳಲ್ಲೇ ಕಳೆದು ಹೋದ ನಮಗೆ ಇನ್ನೊಬ್ಬರ ಬಗ್ಗೆ ತಿಳಿಯುವ ಆಸಕ್ತಿಯೇ ಉಳಿದಿಲ್ಲವೇ? ಇವು ನಮಗೆ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು.
ಪ್ರತಿಯೊಬ್ಬ ಆಟೋರಾಜನ ಅಂತರಾಳವನ್ನ ಕೆದಕಿ ಕಥೆ ಹೇಳಿಸಿ ಅವರ ನೋವು, ನಲಿವಿಗೆ ತುಡಿಯುತ್ತ, ಮೋಸ ಮಾಡುವವರನ್ನು ತಾರಾಮಾರಿ ಉಗಿಯುತ್ತಾ ಕೊನೆಯಲ್ಲಿ ಎಷ್ಟಾದರೂ ಆಟೋ ರಾಜ ಎಂಬ ಸಹಾನುಭೂತಿಯನ್ನು ಮೆರೆಯುತ್ತಾ ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನು ಆಟೋದಲ್ಲಿಯೇ ಸುತ್ತಿಸುತ್ತಾರೆ.
ಒಂದಿಷ್ಟು ಮಾತುಕತೆಗಳು ಯಾರ ಮನಸ್ಸನ್ನಾದರೂ ತಿಳಿಯಾಗಿಸಬಹುದು. ಜೀವನದ ಆಯಾಸವೆಲ್ಲಕ್ಕೂ ಸಣ್ಣ ಸಮಾಧಾನವಾಗಿ ಕಿರು ನಗೆಯೊಂದನ್ನು ತೇಲಿಸಬಹುದು. ಇಲ್ಲಿ ಲೇಖಕಿ ಅವರನ್ನು ಮಾತಿಗೆಳೆದು ಸಾಂತ್ವನಿಸಿದಂತೆ, ಅವರಿಂದ ಸಾಂತ್ವನಗೊಂಡಿದ್ದೂ ಇದೆ.
ಕೆಲವೊಂದು ಬರಹಗಳನ್ನು ಓದವಾಗ ಮನಸ್ಸು ದ್ರವಿಸಿ ಹೋಗುತ್ತದೆ. ಬದುಕಿನ ಅನಿರೀಕ್ಷಿತ ತಿರುವುಗಳಿಗೆ ಎದುರುಗೊಳ್ಳುವ ಅವರ ತಲ್ಲಣಗಳು, ಅಸಹಾಯಕತೆ, ದೈನೆಸೀತನ, ಅರಿವಿದ್ದೂ ಮಾಡುವ ಮೋಸಗಳು ಅದರ ಹಿಂದಿರುವ ಕಾರಣಗಳು ನಮ್ಮ ನಡುವೆಯೇ ಇರುವ ಅವರ ಜಗತ್ತಿನ ಬಗ್ಗೆ ಲವಲೇಶವೂ ಗೊತ್ತಿಲ್ಲದೆ ಬದುಕುತ್ತಿರುವ ನಮ್ಮ ಅಸಡ್ಡೆ.. ಇವೆಲ್ಲಕ್ಕೂ ತಳಮಳಿಸಿ ಹೋಗುತ್ತೇವೆ.
ಮಾತಿನಮಲ್ಲರು, ಗಂಭೀರವಾಗಿರುವವರು, ಅಸಲಿಗೇ ಮಾತೇ ಆಡದವರು, ಒಂದಿಷ್ಟು ತಿಕ್ಕಲುತನದವರು ಹೀಗೆ ಯಾರನ್ನೂ ಬಿಡದೇ ಅವರ ಅನುಭವಗಳನ್ನು ದೋಚಿದ್ದಾರೆ. ದೋಚಿದ್ದನ್ನು ರಸವತ್ತಾಗಿ ನಮಗೂ ಸಾಗಿಸಿದ್ದಾರೆ.
ಇದನ್ನು ಓದಿದ ಪ್ರತಿಯೊಬ್ಬರೂ ಮುಂದೆ ತಮಗೆ ಎದುರಾಗುವ ಆಟೋದವರ ಕಥೆಗಳನ್ನು ಕೆಣಕುವ, ಹೊಸದೊಂದು ಅನುಭೂತಿಗೆ ತಮ್ಮನ್ನು ತೆರೆದುಕೊಳ್ಳುವ ಕುತೂಹಲದಲ್ಲಿರುತ್ತಾರೆ.
ಆದ್ರೆ ಹುಷಾರು.. ಲೇಖಕಿಗೆ ಸಿಕ್ಕಂತವರೇ ಎಲ್ಲರಿಗೂ ಸಿಗಲಿಕ್ಕಿಲ್ಲ. ಏನಾದರೂ ಎಡವಟ್ಟು ಮಾಡಿಕೊಂಡು ಇವರನ್ನು ದೂರುವಂತೆಯೂ ಇಲ್ಲ.
ಕಲ್ಲನ್ನೂ ಮಾತಾಡಿಸುವ ವಾಚಾಳಿತನ, ಜಗಳಕ್ಕೆ ನಿಲ್ಲುವ ಗಟ್ಟಿತನ, ಕಥೆಗಳ ಬೆನ್ನಟ್ಟಿ ಹೋಗುವ ಹಪಾಹಪಿತನ, ನಂಬಿ ಮೋಸ ಹೋದಷ್ಟೂ ನಂಬಿಕೆಯೇ ಬದುಕನ್ನು ಸಹ್ಯವಾಗಿಸುವ ದಾರಿ ಎನ್ನುವ ಮುಗ್ಧತನ, ಎಂತಹ ಸನ್ನಿವೇಶವನ್ನೂ ಹಾಸ್ಯದ ಮೂಲಕ ನಿರೂಪಿಸುವ ಅವರ ಶೈಲಿ ಎಲ್ಲರಿಗೂ ಬರದು..
ಒಟ್ಟಾರೆ ಒಮ್ಮೆ ಓದಲೇಬೇಕಾದ ಚಂದದ ಪುಸ್ತಕ..
-ಕವಿತಾ ಭಟ್