#ಓದಿ_ಓದಿಸಿ ( ಪುಸ್ತಕ ಪರಿಚಯ 1 2 ) (ಸುವರ್ಣ ಕರಾವಳಿ – ನಾಗೇಶ್ ಕುಮಾರ್ ಸಿ.ಎಸ್ )
ಅಂದೊಂದು ಕಾಲವಿತ್ತು…!! ಪತ್ತೆದಾರ ಪುರುಷೋತ್ತಮ, ಜಿಂಕೆಯ ಸಾಹಸಗಳು, 007, ಪತ್ತೆದಾರ ಮಧುಸೂಧನ, ಪತ್ತೆದಾರ ಅರಿಂಜಯ, ಪತ್ತೆದಾರ ಗಾಳಿರಾಯ, ಮೇಜರ್ ಹೇಮಂತ್, ಪತ್ತೇದಾರ ಜೋಡಿ ಮೃತ್ಯುಂಜಯ ಮತ್ತು ಕುಮಾರ್, ಮುಂತಾದ ಪಾತ್ರಗಳನ್ನು ಎದುರು ನೋಡುವ, ಅತ್ಯಂತ ಆಸಕ್ತಿಯಿಂದ ಓದುವ, ಕ್ಷಣಕ್ಷಣಕ್ಕೂ ಮೈ ನವಿರೇಳಿಸುವ ಘಟನೆಗಳ ಜೊತೆ ನಾವೂ ಸುಯ್ಯನೆ ಸಾಗುವ, ಅವನೇ ಅವನೇ ಅವನೇ ಕೊಲೆಗಾರ ಎಂದೋ, ಅವನೇ ದರೋಡೆಕೋರ ಎಂದೋ ಯೋಚಿಸುತ್ತಿರುವಾಗ ಘಟನೆಗಳು ಹತಾತ್ತಾಗಿ ತಿರುಗಿ ನಿಂತು ಎತ್ತೆತ್ತಲೋ ಹೋದಂತೆನಿಸಿ, ಕಥೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿ, ಓದುಗರ ಎದೆ ಬಡಿತ ಹೆಚ್ಚಿಸುವ ಕಾದಂಬರಿಗಳ ಕಾಲ. ಒಂದು ಕಾಲಘಟ್ಟದಲ್ಲಿ, ಕನ್ನಡದ ಹೆಸರಾಂತ ಮಾಸಿಕಗಳು ಒಂದಾದರೂ ಪತ್ತೇದಾರಿ ಕಥೆ, ಕಾದಂಬರಿ, ಇಲ್ಲದೇ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಅದು ಓದುವ ಕಾಲವಾಗಿತ್ತು. ಮನುಷ್ಯ ತನ್ನ ಓದಿನ ಮೂಲಕವೇ ಘಟನೆಗಳನ್ನು ಕಲ್ಪಿಸಿಕೊಂಡು, ತಾನೂ ಆ ಕಥಾನಕದ ಭಾಗವೇ ಆಗಿಬಿಡುತ್ತಿದ್ದ.
ಆ ಕಾಲಘಟ್ಟದಲ್ಲಿ ಪ್ರಪಂಚದಲ್ಲಿ ಇರುವ ಹಲವಾರು ದೇಶಗಳ, ಹಲವಾರು ಪಟ್ಟಣಗಳ ಹೆಸರನ್ನು ಕೇಳಿದ್ದು ಈ ಕಾದಂಬರಿಗಳಿಂದಲೇ ಎಂದರೆ ತಪ್ಪಾಗಲಾರದು. ಜಿಂಕೆ ತನ್ನ ಮೊಣಕೈಗೆ ಅವನ ನೆಚ್ಚಿನ ಚಾಕುವನ್ನು ಅಂಟಿಸಿಕೊಂಡು, ಕಾಲಿನ ಸಾಕ್ಸಿನಲ್ಲಿ ರಿವಾಲ್ವರ್ ಇರಿಸಿಕೊಂಡು ಹೊರಬಿದ್ದ ಎಂದರೆ, ನಮಗಿಲ್ಲಿ ಒಂದು ಹೊಸ ನಗರದ ಹೆಸರು ಶಾಶ್ವತವಾಗಿ ಮೆದುಳಿನಲ್ಲಿ ಅಚ್ಚೊತ್ತುತ್ತಿತ್ತು. ಆತ ನೀರಿನಡಿಯಲ್ಲಿ ಎರಡು ನಿಮಿಷ ಮುಳುಗಿಕೊಂಡೇ ಈಜುತ್ತಿದ್ದ ಎಂಬುದನ್ನು ನಂಬಲು ಸಾಧ್ಯವಾಗದೆ ಇದ್ದರೂ ನಂಬಬೇಕಾಗುತ್ತಿತ್ತು. ವಿಧವಿಧದ ಹೆಸರುಗಳುಳ್ಳ ವಿಮಾನ ನಿಲ್ದಾಣಗಳ ಮೂಲಕ ಕಂಡು ಕೇಳರಿಯದ ದೇಶಗಳಿಗೆ ಸಾಗುವ ಆ ಪತ್ತೆದಾರರು ಒಂದು ಕಾಲದ ಹೀಮ್ಯಾನ್ ಗಳಾಗಿದ್ದರು. ಈಗೆಲ್ಲಿ ಹೋಯಿತು ಆ ಪತ್ತೇದಾರಿ ಕಾದಂಬರಿಗಳು ಎಂದು ಯೋಚಿಸಲೂ ಕೂಡಾ ಬಿಡುವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ ಅಲ್ಲವೇ?
ಇಲ್ಲ..ಸ್ವಲ್ಪ ತಾಳಿ. ವರ್ತಮಾನ ಕಾಲದಲ್ಲಿ ನಮ್ಮ ನಾಡಿನಲ್ಲಿ ಮತ್ತೆ ಅಂತಹ ಆಸಕ್ತಿಕರ ಕಥೆಗಳನ್ನು, ಕಾದಂಬರಿಗಳನ್ನು ಬರೆಯುತ್ತಿರುವ ಲೇಖಕರಾದ ಶ್ರೀ ನಾಗೇಶ್ ಕುಮಾರ್ Nagesh Kumar C S ಅವರ ಸುವರ್ಣ ಕರಾವಳಿ ಕಾದಂಬರಿಯನ್ನು ಮೊನ್ನೆ ಓದಿದೆ.
ಪತ್ತೇದಾರಿ ಕಾದಂಬರಿಯೊಂದನ್ನು ಬರೆಯಲು ಮೊದಲು ಒಂದಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಯಾವ ವಿಷಯದ ಬಗ್ಗೆ ಬರೆಯಬೇಕು ಎಂಬುದನ್ನು ಮೊದಲೇ ಸಿದ್ದಪಡಿಸಿ ಇಟ್ಟುಕೊಂಡಿದ್ದರೂ ಕೂಡಾ, ಅದನ್ನು ಮೊದಲೇ ಹೇಳಬೇಕಾ, ನಡುವಲ್ಲಿ ಹೇಳಬೇಕಾ ಅಥವಾ ಅಂತ್ಯದಲ್ಲಿ ಹೇಳಬೇಕಾ ಎಂಬುದನ್ನು ನಿರ್ಧರಿಸುವುದು ಸ್ವಲ್ಪ ಕಠಿಣವೇ !! ಹಿಂದಿನ ಬಹಳಷ್ಟು ಲೇಖಕರು, ಕಥೆಯ ಪ್ರಾರಂಭದಲ್ಲೇ ಪತ್ತೆದಾರನಿಗೆ ವಿಷಯ ವಿವರಿಸುವಂತೆ, ಆ ನಂತರ ಪತ್ತೇದಾರ ಆಯಾ ದೇಶಗಳಿಗೆ ಹೋಗಿ ತನ್ನ ಕಾರ್ಯ ಸಾಧಿಸಿಕೊಂಡು ಬರುವಂತೆ ಕಥೆಯನ್ನು ಹೆಣೆದಿರುತ್ತಿದ್ದರು. ಆ ಮೂಲಕ ಪತ್ತೆದಾರ ಏನು ಪತ್ತೆ ಮಾಡಬೇಕು ಎಂಬುದು ಓದುಗರಿಗೂ ಗೊತ್ತಿರುತ್ತಿತ್ತು. ಇನ್ನೂ ಕೆಲವು ಲೇಖಕರು, ಕಾದಂಬರಿ ಮುಂದುವರಿಯುತ್ತಾ ಹೋಗುತ್ತಿರುವಾಗ ನಡುವಲ್ಲಿ ಒಂದು ಕಡೆ ಓದುಗರಿಗೆ ವಿಷಯ ತಿಳಿಸಿಯೂ ಕುತೂಹಲ ಕಾಯ್ದುಕೊಂಡು ಹೋಗುವಂತೆ ಬರೆಯುತ್ತಿದ್ದರು.
ನಾಗೇಶ್ ಕುಮಾರ್ ಅವರ ‘ಸುವರ್ಣ ಕರಾವಳಿ’ ಯಲ್ಲಿ ಕೊನೆಯ ಹಂತದವರೆಗೂ ಕುತೂಹಲವನ್ನು ಕಾಯ್ದಿಟ್ಟುಕೊಂಡಿದ್ದಾರೆ. ಲೇಖಕರು ಚನ್ನೈ ನಿವಾಸಿ ಆದ ಕಾರಣವೋ ಏನೋ ಗೊತ್ತಿಲ್ಲ, ಆದರೆ ಸಮುದ್ರ, ಸಮುದ್ರ ತೀರ, ನೌಕಾಪಡೆ, ನೌಕಾನೆಲೆ, ಇಂತಹ ವಸ್ತು-ವಿವರಗಳು, ಹಂದರಗಳನ್ನು ಜಾಸ್ತಿ ಬಳಸುತ್ತಾರೆ ಎನ್ನಿಸುತ್ತಿದೆ. ಆದರೆ, ನಿಖರವಾಗಿ ವಿವರಗಳನ್ನು ಕಲೆಹಾಕಿ ಪಾತ್ರಪೋಷಣೆ ಮಾಡುವ ಮೂಲಕ ಇವರು ಪಾತ್ರಗಳನ್ನು ಓದುಗರಿಗೆ ಆಪ್ತವಾಗಿಸಬಲ್ಲರು. ಮತ್ತು ಅನಗತ್ಯವಾಗಿ ಕಥೆಯನ್ನು ಎಳೆದಾಡದೇ ಬರೆಯುವ ಕಾರಣ ಬಹಳ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಹಾಗೂ ಇಷ್ಟವಾಗುತ್ತದೆ. ಈ ಕಾದಂಬರಿಯಲ್ಲಿ ಪ್ರಾರಂಭದಲ್ಲಿ ಒಂದು ಘಟನೆ ಬರುತ್ತದೆ. ಅದಕ್ಕೂ ಇಡೀ ಕಥೆಗೂ ಏನು ಸಂಬಂಧ ಎಂಬುದು ನಮಗೆ ಕೊನೆಯವರೆಗೂ ತಿಳಿಯುವುದಿಲ್ಲ. ಯಾಕಾಗಿ ಲೇಖಕರು ಮೊದಲ ಘಟನೆ ಬರೆದಿದ್ದಾರೆ ಎಂದು ಓದುತ್ತಾ ಓದುತ್ತಾ ಹೋದಂತೆ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಕೊನೆಯಲ್ಲಿ ಸಂಪೂರ್ಣ ವಿವರಗಳು ಗೊತ್ತಾದ ನಂತರ ಒಮ್ಮೆ ಅಯ್ಯೋ, ಎಷ್ಟು ಸೊಗಸಾಗಿ ಬರೆದಿದ್ದಾರೆ ಇವರು ಎಂದು ಉದ್ಘರಿಸುವಂತೆ ಆಗುತ್ತದೆ.
ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾರೆ. ಆದರೆ ಈ ಲೇಖಕರು ನಾಗೇಶ್ ಕುಮಾರ್ ಇವರು ಹೊರನಾಡಿನಲ್ಲಿ ವೃತ್ತಿನಿರತರಾಗಿ ವಾಸವಾಗಿದ್ದೂ ಕೂಡಾ ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿರುವ ಬರಹಗಾರರು. ಎರಡು ವರ್ಷಗಳ ಮೊದಲೇ ಇವರ ಎರಡು ಕಾದಂಬರಿಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಿ ಮಾರಾಟ ಮಾಡುವ ಸಾಹಸ ಮಾಡಿದ್ದರು. ಆಗ ಡಿಜಿಟಲ್ ಪ್ರತಿಯನ್ನು ಇನ್ಸ್ಟಾಮೊಜಿಯೋ ದಿಂದ ಖರೀದಿ ಮಾಡಿದ್ದೆ. ಹಾಗೊಂದು ಮಾರಾಟ ಸಾಧ್ಯತೆ ಇದೆ ಎಂಬುದು ಗೊತ್ತಾಗಿದ್ದೆ ಲೇಖಕರಿಂದ. ಆ ಸಮಯದಲ್ಲಿ ಅದೊಂದು ಹೊಸ ಪ್ರಯತ್ನವೂ ಆಗಿತ್ತು. ತಮ್ಮದೇ ಬ್ಲಾಗ್ ನಲ್ಲಿ ಆಧಾರ ಸಹಿತವಾಗಿ ಬರೆಯುವ ಲೇಖಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರತಿಲಿಪಿಯಲ್ಲಿ ಸಕ್ರಿಯ ಬರಹಗಾರರಾಗಿದ್ದು ತಾಯಿ ಕನ್ನಡಾಂಬೆಯ ಸೇವೆಯನ್ನು ಸಾಧ್ಯವಾದ ರೀತಿಯಲ್ಲಿ ಮಾಡುತ್ತಿದ್ದಾರೆ.
ಹಾಗಂತ ಕೇವಲ ಪತ್ತೇದಾರಿ ಕಥೆ ಕಾದಂಬರಿಗಳನ್ನು ಮಾತ್ರ ಬರೆಯುತ್ತಾರೆ ಇವರು ಎಂದು ಭಾವಿಸುವ ಅಗತ್ಯವಿಲ್ಲ. ಇವರ ಆಸಕ್ತಿ ಬಹಳ ವೈವಿಧ್ಯಮಯ. ಪೌರಾಣಿಕ ಪ್ರಸಂಗಗಳು, ತಮಿಳು ಸಾಹಿತ್ಯ, ವೈಜ್ಞಾನಿಕ ಬರಹಗಳು, ಸಾಮಾಜಿಕ ಕಥೆ-ಕಾದಂಬರಿಗಳು, ಪ್ರವಾಸ, ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳು, ಮುಂತಾದ ರೋಚಕ ವಿಷಯಗಳ ಬಗ್ಗೆ ಕೂಡಾ ಅಪಾರ ಅಧ್ಯಯನದೊಂದಿಗೆ, ಸರಿಯಾದ ಮಾಹಿತಿಯೊಂದಿಗೆ, ಸೂಕ್ತ ಆಧಾರಗಳನ್ನಿಟ್ಟು ಹಲವು ಲೇಖನಗಳನ್ನೂ ಇವರು ಬರೆದಿದ್ದಾರೆ. ಲೇಖಕರ ಇನ್ನೂ ಹಲವು ಬರಹಗಳನ್ನು ಉಚಿತವಾಗಿ ಓದಬಹುದು ಮತ್ತು ಪ್ರಕಟವಾದ ಕಾದಂಬರಿಗಳನ್ನು ಖರೀದಿಸಲು ಅವರನ್ನು ಸಂಪರ್ಕಿಸಿ. ಲೇಖಕರು ಇನ್ನೂ ಹೆಚ್ಚು ಸಾಹಿತ್ಯ ಸೇವೆ ಮಾಡಲಿ ಎಂದು ಆಶಿಸುತ್ತಾ, ಕರ್ನಾಟಕ ರಾಜ್ಯೋತ್ಸವದ ಈ ಶುಭದಿನ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ.
ಚನ್ನೈ ನಂತಹ ಕನ್ನಡಿಗರು ಕಡಿಮೆ ಇರುವ ಜಾಗದಲ್ಲಿ ಇದ್ದು, ಕನ್ನಡ ಭಾಷೆಯನ್ನೂ ನೆನಪಿನಲ್ಲಿ ಇರಿಸಿಕೊಂಡು, ಭಾಷಾಸಾಹಿತ್ಯಸೇವೆ ಮಾಡುತ್ತಿರುವ ಲೇಖಕ, ನಾಗೇಶ್ ಕುಮಾರ್ ಅವರ ಈ ಕಾದಂಬರಿ “ ಸುವರ್ಣ ಕರಾವಳಿ “ ಇದು ಪುಸ್ತಕ ರೂಪದಲ್ಲಿ ಕರಾಳ ಗರ್ಭದ ಜತೆಯೆ ಎರಡನೇ ಕತೆಯಾಗಿದೆ. ಅಲ್ಲದೇ ಪ್ರತಿಲಿಪಿಯಲ್ಲಿ 10547 ಜನ ಓದುಗರನ್ನು ಪಡೆದಿದೆ. 250 ಪುಸ್ತಕ ಪ್ರತಿಗಳು ಸಪ್ನಾದಲ್ಲಿ ಮಾರಲ್ಪಟ್ಟಿವೆ.
=================================
ಈ ಕಿರು ಕಾದಂಬರಿ ಕರಾಳ ಗರ್ಭ ಪುಸ್ತಕದಲ್ಲಿ ಎರಡನೆಯದಾಗಿ ಸೇರಿಸಲ್ಪಟ್ಟು ಪ್ರಕಟವಾಗಿದೆ. ಪುಸ್ತಕವನ್ನುಸಪ್ನಾ ಪುಸ್ತಕ ಮಳಿಗೆಯಿಂದ ಖರೀದಿ ಮಾಡಬಹುದು. ಲಿಂಕ್ ನೋಡಿ.
https://www.sapnaonline.com/books/karaala-garbha-cs-nagesh-1234095289-5551234095282?position=3&searchString=
=================================
ಇದನ್ನು ಈ ಲಿಂಕಿನಲ್ಲಿ ಓದಬಹುದು.
ಬುಕ್ ಬ್ರಹ್ಮದಲ್ಲಿ ಲೇಖಕರ ಬಗ್ಗೆ ಪರಿಚಯ ಪುಟ ಓದಲು ಈ ಕೊಂಡಿಯನ್ನು ಒತ್ತಿ.
https://www.bookbrahma.com/author/c-s-nagesh-kumar
ಇವತ್ತಿನ ಪತ್ತೇದಾರಿ ಸಾಹಿತ್ಯದ ಸ್ಥಿತಿಗತಿಗಳ ಕುರಿತು ನಾಗೇಶ್ ಕುಮಾರ್ ಸಿ ಎಸ್ ಅವರು ಬರೆದ ವಿಮರ್ಶಾತ್ಮಕ ಲೇಖನದ ಕೊಂಡಿ ಇಲ್ಲಿದೆ. ಇದೊಂದು ಮಹತ್ವಪೂರ್ಣ ಲೇಖನವಾಗಿದ್ದು, ಸಾಹಿತ್ಯಪ್ರೇಮಿಗಳ ಆಸಕ್ತಿ ಕೆರಳಿಸುತ್ತದೆ, ಹಿಂದಿನ-ಇಂದಿನ ಪತ್ತೇದಾರಿ ಲೇಖಕರ ಪರಿಸ್ಥಿತಿಯ ವಿಸ್ತಾರ ವಿವರ ನೀಡುತ್ತದೆ.
=====================
ಗೌತಮಾಯನ – Gouthamaayana
01/11/2019
https://www.facebook.com/gouthamaayana/
===================
–ಗುರುಪ್ರಸಾದ್ ಕಾನಲೆ