#ಪುಸ್ತಕ_ಪಯಣ_೨೦೨೧
ಕೃತಿ: ನನ್ನ ದೇವರು ಮತ್ತು ಇತರ ಕಥೆಗಳು
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು
ತೀರಾ ಇತ್ತೀಚಿನವರೆಗೆ ಕುವೆಂಪುರವರು ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಹಾಗಾಗಿ ಅವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಹಾಗೂ ‘ಸನ್ಯಾಸಿ ಮತ್ತು ಇತರ ಕಥೆಗಳು’ ಕಥಾಸಂಕಲನಗಳು ಬಗ್ಗೆ ತಿಳಿದಾಗ ಕುತೂಹಲದಿಂದ ಖರೀದಿಸಿದೆ. ಬಹಳ ಸೂಕ್ಷ್ಮವಾಗಿ ಸುತ್ತಮುತ್ತಲಿನ ಪರಿಸರವನ್ನು, ಜನಜೀವನದ ಹಲವು ಮಜಲುಗಳನ್ನು ವಿವರವಾಗಿ ಅವರು ಚಿತ್ರಿಸುವ ಪರಿಗೆ ಬೆರಗಾಗಿದ್ದ ನಾನು ಸಣ್ಣ ಕಥೆಗಳ ಚೌಕಟ್ಟಿನಲ್ಲಿ ತಮ್ಮ ಸೃಜನಶೀಲತೆಯನ್ನು ಅವರು ಹೇಗೆ ಹಿಡಿದಿಟ್ಟಿರಬಹುದು ಎಂಬುದನ್ನು ಓದಲು ಕಾತರನಾಗಿದ್ದೆ. ಈ ಕಥಾಸಂಕಲವನ್ನು ಓದಿದ ಬಳಿಕ ನನ್ನಲ್ಲಿದ್ದ ಸಂಶಯಗಳೆಲ್ಲವೂ ನಿವಾರಣೆಯಾಗಿ ಅವರೇಕೆ ಮಹಾಕವಿ, ರಸ ಋಷಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಮನವರಿಕೆಯಾಯಿತು. ಇದರಲ್ಲಿ ಒಟ್ಟು ಎಂಟು ಸಣ್ಣ ಕಥೆಗಳಿವೆ.
#ನನ್ನದೇವರು
ಆಕೆಯ ಗಂಡ ಮದುವೆಯಾದ ವರ್ಷದೊಳಗೆ ತೀರಿಕೊಂಡರು. ಗಂಡನ ಅಣ್ಣ ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿ. ಅವಿವಾಹಿತ. ಸದಾ ಓದು ಧ್ಯಾನಗಳಲ್ಲಿ ಮಗ್ನ. ಅವನು ಎಲ್ಲರಂತಿಲ್ಲದ ಕಾರಣ ಊರ ಜನರ ಕಣ್ಣಲ್ಲಿ ಒಬ್ಬ ಹುಚ್ಚ. ಕಾಲ ಉರುಳಿದಂತೆ ಆಕೆಗೆ ತನ್ನ ಭಾವನೆ ಮೇಲೆ ಅನುರಾಗ ಅರಳುತ್ತದೆ. ಅವನು ಸಹ ತನ್ನತ್ತ ಆಕರ್ಷಿತನಾಗಿದ್ದಾನೆ ಅನಿಸುತ್ತದೆ. ಒಂದು ದಿನ ಸಂಯಮ ಮೀರಿ ನೋಡು ರಾತ್ರಿಯ ಹೊತ್ತಿಗೆ ಅವನ ಕೋಣೆಗೆ ಹೋಗುತ್ತಾಳೆ.. ಮುಂದೇನಾಯಿತು?
ಕಥೆಯ ಈ ಸಾಲುಗಳನ್ನು ನೋಡಿ. “ಎಷ್ಟು ಕರಗಿದರೂ ಅದೆಂದೂ ಹಿಮಾಲಯವೇ. ಅಲ್ಲದೆ ಮಂಜು ಕರಗಿದರೂ ಅದು ಪವಿತ್ರವಾದ ಗಂಗಾ ನದಿಯಾಗದೆ ಕೊಳಕು ಕಾಲುವೆಯಾಗುವುದೇ? ಗಂಗೆ ಕೊಳಕು ಕಾಲುವೆಯನ್ನು ತೊಳೆದು ಪುನೀತವನ್ನಾಗಿ ಮಾಡದೆ ತಾನೇ ಎಂದಿಗಾದರೂ ಕೊಳಕಾಗುವುದೇ?” ಎಂತಹಾ ಅರ್ಥಗರ್ಭಿತ ಸಾಲುಗಳು…. ಎಷ್ಟು ಸರಳವಾಗಿ ನಮ್ಮ ವ್ಯಕ್ತಿತ್ವವು ಕೆಟ್ಟದನ್ನು ಸಹ ಪರಿಶುಧ್ಧವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳಿದ್ದಾರೆ. ಆದರೆ ವಿಚಾರಶುಧ್ಧಿ ಇರಬೇಕಷ್ಟೇ…. ತನ್ನ ಜೊತೆಗೆ ಕೆಟ್ಟ ವಿಚಾರಗಳು ಆಲೋಚನೆಗಳನ್ನು ಸಹ ಶುಭ್ರಗೊಳಿಸಿ ನಿವಾರಿಸಬಲ್ಲಂತಹ ವ್ಯಕ್ತಿತ್ವದ ವ್ಯಕ್ತಿ ದೈವತ್ವವನ್ನು ಪಡೆಯಬಹುದು ಅನ್ನುವುದನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಹೇಳಲು ಸಾಧ್ಯ…..
#ಔದಾರ್ಯ
ಯಾವ ವ್ಯಕ್ತಿಗೆ ಎಷ್ಟು ಔದಾರ್ಯ ತೋರಬೇಕು ಎಂಬುದು ಸಹ ಜಾಣತನದ ಲೆಕ್ಕ. ಅಳತೆ ಮೀರಿದ ಔದಾರ್ಯವನ್ನು ಯಾರಿಗೂ ತೋರಬಾರದು. ಅದೇ ನಮಗೆ ಉರುಳಾಗುವ ಸಂಭವಗಳು ಜಾಸ್ತಿ ಎಂದು ಈ ಕಥೆ ಹೇಳುತ್ತದೆ. ತುಂಗಾ ನದಿಯ ರಾಮ ತೀರ್ಥದಲ್ಲಿ ನಿರೂಪಕ ಮತ್ತು ಅವರ ಮೇಷ್ಟರ ನಡುವೆ ನಡೆಯುವ ಸಂಭಾಷಣೆ, ಅಪಾತ್ರರಿಗೆ ಅತಿಯಾದ ಔದಾರ್ಯ ತೋರಿದಾಗ ಉಂಟಾದ ಅವಘಡಗಳನ್ನು ಹೇಳುತ್ತದೆ. ಇಲ್ಲಿ ನಮ್ಮ ಜೀವನದ ಪ್ರಾಮುಖ್ಯತೆ ಮತ್ತು ಔಚಿತ್ಯವನ್ನು ಜಿಜ್ಞಾಸೆಗೆ ಒಳಪಡಿಸುವ ಈ ಉಪಮೆಯನ್ನು ನೋಡಿ.
“ದೂರ ಪಶ್ಚಿಮ ದಿಕ್ಕಿನಿಂದ ಪರ್ವತ ಕಂದರಗಳ ನಡುವೆ ನುಗ್ಗಿ ಬಂದು ಕಾಣಿಸಿಕೊಂಡು ಮತ್ತೆ ಪೂರ್ವದಿಕ್ಕಿನ ಪರ್ವತಗಳ ಇಡುಕಿನಲ್ಲಿ ನುಸಿದು ಕಣ್ಮರೆಯಾಗುವ ತುಂಗೆ ಅನಂತದಿಂದ ಮಿಂಚಿ ಮರಳಿ ಅನಂತದಲ್ಲಿ ಮರೆಯಾಗುವ ದಿವ್ಯ ಭಾವದಂತೆ ಮಂಗಳ ಮನೋಹರವಾಗಿ ತೋರಿದಳು”
ಮನುಜ ಜನ್ಮವೂ ಅಷ್ಟೇ… ಎಲ್ಲಿ ಮೊದಲಾಗಿ ಎಲ್ಲಿಗೆ ಕೊನೆಯಾಗುವುದು ಗೊತ್ತಿಲ್ಲ. ಪ್ರಕಟವಾಗಿ ಹರಿಯುವ ನದಿಗೆ ಇರುವ ಪ್ರಾಮುಖ್ಯತೆ ನಾವು ಸವೆಸುವ ದಿನಗಳಿಗಿರುತ್ತದೆ. ಆದರ್ಶ ಔದಾರ್ಯಗಳಲ್ಲಿ ಕೊಚ್ಚಿ ಹೋಗದೆ ಅಜ್ಞಾತವಾಗಿ ಅನಂತವನ್ನು ಸೇರುವುದು ಉತ್ತಮ ಅಲ್ಲವೇ….
#ಆದರ್ಶಸಾಧನೆ
ಪ್ರತಿಯೊಬ್ಬ ವ್ಯಕ್ತಿಗೂ ತಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕು… ತನ್ನದು ಇತರರಿಗಿಂತ ಹೆಚ್ಚು ಹೆಚ್ಚು ಆದರ್ಶ ಸಾಧನೆಯಾಗಿರಬೇಕು ಎಂಬ ಆಕಾಂಕ್ಷೆ ಇರುತ್ತದೆ. ಆದರೆ ವಾಸ್ತವವು ನಮ್ಮ ಮುಂದೆ ಒಡ್ಡುವ ಸವಾಲುಗಳ ಮುಂದೆ ಆದರ್ಶಗಳು ಒಂದೊಂದಾಗಿ ಕುಸಿಯಲಾರಂಭಿಸುತ್ತವೆ. ಆದರ್ಶ ಸಾಧನೆಗೆ ಉತ್ತಮ ಮಾರ್ಗ ಎಂಬುದು ಇರುವುದೇ ಅಥವಾ ವಾಸ್ತವದಲ್ಲಿ ಸ್ವಾಭಾವಿಕವಾಗಿ ಜೀವಿಸಿಕೊಂಡು,ಲೋಕರೂಢಿಯ ಬದುಕನ್ನು ಬದುಕುತ್ತಾ ಕೆಸರಿನಲ್ಲರುವ ಪದ್ಮದಂತೆ ಯಾವುದಕ್ಕೂ ಅಂಟಿಕೊಳ್ಳದೆ ಸಾಧನೆ ಮಾಡಬಹುದೇ? ಸನ್ಯಾಸ ಬ್ರಹ್ಮಚರ್ಯದಂತಹ ಮಾರ್ಗದಲ್ಲಿ ನಡೆದರೆ ಅದು ಉತ್ತಮವೇ ಅಥವಾ ಸಂಸಾರಿಯಾಗಿ ನಾಲ್ಕು ಜನರಿಗೆ ಹಿತವಾಗುವಂತೆ ಬಾಳುವುದು ಉತ್ತಮವೇ? ನಿರೂಪಕನ ಈ ಮಾತುಗಳನ್ನು ಕೇಳಿ…ನಿರ್ಧಾರ ನಮ್ಮ ವಿವೇಚನೆಗೆ ಬಿಟ್ಟಿದ್ದು….. “ನೀರಿನಲ್ಲಿ ಇರಬೇಕಾದ ಮೀನು ಭೂಮಿಯ ಪ್ರಾಣಿಗಳನ್ನು ನೋಡಿ ನೆಲದ ಮೇಲೆ ಓಡಾಡುವುದೇ ನೀರಿನಲ್ಲಿ ಈಜುವುದಕ್ಕಿಂತ ಉತ್ತಮ ಆದರ್ಶವೆಂದು ತಿಳಿದು ನೆಗೆದರೆ ಆತ್ಮಹತ್ಯೆ ಮಾಡಿಕೊಂಡಂತೆ ಆಗುವುದಿಲ್ಲವೇ? ಅಸ್ವಾಭಾವಿಕವಾದುದೆಲ್ಲವೂ ಅಧರ್ಮವಲ್ಲವೇ?”
#ಧನ್ವಂತರಿಚಿಕಿತ್ಸೆ
ತಮಗೆ ಆಗಾಗ ಕೇಳಿಬರುವ ಹೃದಯವಿದ್ರಾವಕ ಆರ್ತನಾದದ ಮೂಲವನ್ನು ಹುಡುಕುತ್ತಾ ಋಷಿಗಳಾದ ವಿಶ್ವಾಮಿತ್ರ ಮತ್ತು ಪರಶುರಾಮರು ನಾರದ ಮಹರ್ಷಿಯ ಸಲಹೆಯಂತೆ ನಂದನವನದಿಂದ ಭೂಮಿಗೆ ಬರುತ್ತಾರೆ… ಭೂಮಿಯ ಮೇಲಿರುವ ಹಲವಾರು ಆಧುನಿಕ ಸೌಲಭ್ಯಗಳು ಸೌಕರ್ಯಗಳು ಮತ್ತು ಸಂಸ್ಕೃತಿ ನಾಗರಿಕತೆಯ ಹೆಸರಿನಲ್ಲಿ ಅಳಿಯುತ್ತಿರುವ ಮೌಲ್ಯಗಳನ್ನು ನೋಡಿದಾಗ ದಿಗ್ಭ್ರಾಂತರಾಗುತ್ತಾರೆ. ತಾವು ನಗರದಲ್ಲಿ ಇರುವಷ್ಟು ದಿವಸ ಕೇಳದ ಆರ್ತನಾದ ಅಲ್ಲಿಂದ ಹೊರ ಹೋದಂತೆ ಮತ್ತೆ ಕೇಳಲಾರಂಭಿಸುತ್ತದೆ. ಬೆನ್ನಟ್ಟಿ ಹೋದವರಿಗೆ ಒಂದು ಗುಡಿಸಲಿನಿಂದ ಶಬ್ದವು ಬರುತ್ತಿದೆ ಎಂಬುದು ಮನವರಿಕೆಯಾಗುತ್ತದೆ. ಒಳಗಡೆಗೆ ನೋಡಿದಾಗ ಒಂದು ರೈತ ಕುಟುಂಬವು ದಟ್ಟ ದಾರಿದ್ರ್ಯದಲ್ಲಿ ಬದುಕುತ್ತಿರುತ್ತದೆ. ಹಾಗಾದರೆ ಆರ್ತನಾದ ಏಕೆ ಬರುತ್ತಿತ್ತು? ರೈತನಿಗೆ ಅಂಟಿಕೊಂಡಿದ್ದ ರೋಗವೇನು? ಸ್ವರ್ಗಕ್ಕೆ ಕೇಳುವ ಅವನ ಕೂಗು ನಗರದಲ್ಲಿನ ಅಬ್ಬರದ ನಡುವೆ ಏಕೆ ಮರೆಯಾಯಿತು? ಆ ರೈತನ ರೋಗವು ವಾಸಿಯಾಯಿತೇ?ಕಥೆಯನ್ನು ಓದಿ ನೋಡಿ…. ಈ ಸಂಕಲನದ ಅತ್ಯುತ್ತಮ ಕಥೆ. ಸಂವೇದನಾಶೀಲತೆಯನ್ನು ಕಳೆದುಕೊಂಡ ಸಮಾಜದ ಅಧಃಪತನವನ್ನು ಕುಟುಕುವ ಈ ಕಥೆ ಇಂದಿಗೂ ಪ್ರಸ್ತುತ… ಮತ್ತು ಲೇಖಕರ ಕಾಲಘಟ್ಟಕ್ಕೂ ಇಂದಿಗೂ ಒಂದು ಚೂರು ಸಹ ವ್ಯತ್ಯಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಏಳೆಂಟು ಪುಟಗಳಿಷ್ಟಿರುವ ಕಥೆಗಳು ಮಲೆನಾಡಿನ ಜೀವನ ಚಿತ್ರದ ಜೊತೆಗೆ ಜೀವನ ಮೌಲ್ಯಗಳ ಕುರಿತಾಗಿ ಒಟ್ಟು ಸಮಾಜವು ಯಾವ ದಿಕ್ಕಿನಲ್ಲಿ ದಾರಿ ತಪ್ಪಿದೆ ಮತ್ತು ಅದು ಹೇಗೆ ನಡೆಯಬೇಕಿತ್ತು ಎಂಬುದನ್ನು ತಿಳಿಸಿ ವಿವೇಚನೆಗೆ ಹಚ್ಚುತ್ತದೆ.
ನಮಸ್ಕಾರ,
ಅಮಿತ್ ಕಾಮತ್