ಪುಸ್ತಕ: ಮಿಹಿರಕುಲಿ
ಲೇಖಕ: ಸದ್ಯೋಜಾತ ಭಟ್ಟ
ಸಮನ್ವಿತ ರೂ. 250/- ~~
ಇದೊಂದು ಸಂಶೋಧನಾತ್ಮಕ ಅಧ್ಯಯನ ಗ್ರಂಥದ ರೂಪದಲ್ಲಿ ಹೊರಬಂದಿರುವ ಹಲವಾರು ಬೆರಗಾಗಿಸುವಂತಹ ನಾವು ಓದಿರದ ಕೇಳಿರದ ದಾಖಲೆ ಮಾಹಿತಿಗಳನ್ನು ಒದಗಿಸುವ ಅಪೂರ್ವ ಪ್ರಕಟನೆ. ಸುಮಾರು ಒಂದು ವಾರ ಬಿಡದೇ ಓದಿ ಜೀರ್ಣಿಸಿಕೊಳ್ಳಬೇಕಾಯಿತು; ಗಹನವಾದ ವಿಚಾರಧಾರೆ!.
ಮಿಹಿರಕುಲಿ- ಸದ್ಯೋಜಾತರ ನಾಲ್ಕನೆ ಪುಸ್ತಕ. ಇದರ ಮುಖ್ಯ ವಿಷಯ ನಾವು ಓದುತ್ತಾ ಬಂದಿರುವ ಜನಪ್ರಿಯ ಇತಿಹಾಸದ ಪರದೆ ಸರಿಸಿ, ದೆಹಲಿಯ ಕುತುಬ್ ಮಿನಾರ್ ಮತ್ತು ಪಕ್ಕದ ಮಸೀದಿ ಕಟ್ಟಡಗಳು- ಏಕೆ ಕುತುಬುದ್ದೀನ್ ಐಬಕ್ ಎಂಬ ಗುಲಾಮ ಮನೆತನದ ಮುಸ್ಲಿಮ್ ದೊರೆಯ ಸಾಧನೆಯಲ್ಲ, ಆದರೆ ರಾಜಾ ವಿಕ್ರಮಾದಿತ್ಯನ ಕಾಲದಲ್ಲಿ ಮಹಾನ್ ಜ್ಯೋತಿಷ್ಯ ತಜ್ಞ ವರಾಹಮಿಹಿರನ ಕಾಲದಲ್ಲೇ ಕಟ್ಟಿದ ಖಗೋಲ ವೀಕ್ಷಣಾ ಮತ್ತು ಅಧ್ಯಯನ ಕೇಂದ್ರವಾಗಿತ್ತು ಎಂಬುದು.
ಮಿಹಿರ+ ಆವಲಿ ಎಂಬ ಆತನ ಹೆಸರಿನ ಮೇಲೆ ಇದ್ದ ಪ್ರದೇಶ ಇಂದಿನ ಕುತುಬ್ ಮಿನಾರ್ ಇರುವ ದೆಹಲಿಯ ಮೆಹ್ರೌಲಿ ಬಡಾವಣೆ ಆಗಿದೆ,
ಅದರ ಕಟ್ಟಡದ ಮೇಲ್ಮೈಯಲ್ಲಿ ಮಾತ್ರ ಪರ್ಶಿಯನ್ ಬರಹ ಕೆತ್ತಿಸಿದ್ದು, ಮಿಕ್ಕ ಕಟ್ಟಡವೆಲ್ಲಾ ಸನಾತನ ಸಂಸ್ಕೃತಿಯ 27 ವಿಷ್ಣು ದೇವಾಲಯಗಳ ಅವಶೇಷಗಳಿಂದ ಕೂಡಿದೆಯಂತೆ. ಸುತ್ತಲೂ ಉತ್ಖನನ ಮಾಡಿದಾಗ ಸಂಸ್ಕೃತ, ಪ್ರಾಕೃತ ಶಿಲಾ ಶಾಸನಗಳೂ ದೊರೆತು ಕೇವಲ ನಾಲ್ಕು ವರ್ಷದಲ್ಲಿ ಐಬಕ್ ಇದನ್ನು ಕಟ್ಟಿದ ಎಂಬ ವಾದವನ್ನು ಹುಸಿ ಮಾಡುತ್ತದೆ ಎನ್ನುತ್ತಾರೆ ಲೇಖಕರು.
27 ದೇವಳ ಮತ್ತು ಕೆರೆಗಳನ್ನೂ ದ್ವಂಸ ಮಾಡಿ, ನಾಶ ಮಾಡಿ ತಾನು ಕುವ್ವತ್ ಉಲ್ ಮಸೀದಿಯೆಂದು ಕಟ್ಟಿದ್ದಾಗಿ ಸ್ವತಃ ಕುತ್ಬುದ್ದೀನ್ ಐಬಕ್ ಹೇಳಿರುವುದೇ ದಾಖಲೆಯಿದೆಯೆನ್ನುತ್ತಾರೆ.
ಆಗಿನ ಮುಸ್ಲಿಮ್ ಅರಸರ ದಾಳಿಯಲ್ಲಿ ನಾಶವಾಗಿ ವಿರೂಪವಾದ ನೂರಾರು ಹಿಂದೂ ದೇವಸ್ಥಾನಗಳು ಎಂತಹಾ ಮತೀಯ ಅಸಹನೆಯ ಮಾತ್ಸರ್ಯದ ಜ್ವಲಂತ ಕುರುಹುಗಳು ಎಂಬುದೂ ನಮಗೆ ಹೊಸದೇನಲ್ಲ. ಹಲವು ಬಾರಿ ಈ ಬಗ್ಗೆ ನಾವು ಅನ್ಯ ಪುಸ್ತಕಗಳಲ್ಲಿ ಓದಿಯೂ ಇರುತ್ತೇವೆ. ವಿಕ್ರಮಾದಿತ್ಯನ ಕಾಲದಲ್ಲಿ 27 ನಕ್ಷತ್ರಗಳ ಆಧರಿತ ಸೌರಮಾನ ಜ್ಯೋತಿಷ್ಯದ ಲೆಕ್ಕದಲ್ಲಿ ಕಟ್ಟಿದ್ದರಂತೆ ಇದನ್ನು.
ಮಿನಾರ್ ಪಕ್ಕದಲ್ಲಿರುವ ಇನ್ನೊಂದು ವೈಜ್ಞಾನಿಕ ವಿಸ್ಮಯವೆಂದರೆ ವಿಷ್ಣು ಧ್ವಜ ಅಥವಾ ಸ್ಥಂಭ. ಅದು ಧೂಳು ಹತ್ತುವುದಿಲ್ಲ, ತುಕ್ಕುಹಿಡಿಯದ ವಿಶೇಷ ಮಾಪನೆಯ ಅಲಾಯ್ ಲೋಹವಂತೆ. ಇದನ್ನೆಲ್ಲಾ ಕೇವಲ ನಾಲ್ಕೇ ವರ್ಷದಲ್ಲಿ ಲಾಹೋರಿನಲ್ಲಿ ಪಟ್ಟವೇರಿದ ಅಂಗವಿಕಲ ಗುಲಾಮ ದೊರೆ ಕುತ್ಬುದ್ದೀನ್ ಕಟ್ಟಿದ್ದಕ್ಕೆ ಯಾವುದೇ ಪುರಾವೆಯೂ ಇಲ್ಲ, ಸಕಾರಣವೂ ಅಲ್ಲ ಎನ್ನುತ್ತಾರೆ ಸದ್ಯೋಜಾತರು.
ಈ ಪುಸ್ತಕದಲ್ಲಿ ನಮಗೆ ಲೇಖಕರ ವೇದ ಪಾಂಡಿತ್ಯ, ಸಂಸ್ಕೃತದ ಬಗೆಯ ಅಧ್ಯಯನಶೀಲತೆ ಮತ್ತು ಮುಖ್ಯಧಾರೆಯ ಜತೆಗೆ ಮಹಾಭಾರತ, ಪೌರಾಣಿಕ ಕಾಲದ ರಾಜ ಮಹಾರಾಜರ ಕಥೆಗಳು ಮತ್ತು ಉಪಕಥೆಗಳು ವಿವರವಾಗಿ ಸಿಗುತ್ತದೆ. ಕೆಲವೊಮ್ಮೆ ಎಷ್ಟೆಂದರೆ- ಮುಖ್ಯ ವಿಷಯವಾದ ಮಿಹಿರಕುಲಿ/ ಕುತುಬ್ ಮಿನಾರ್ ಬಿಟ್ಟು ಬಹಳ ದೂರ ವಿಷಯಾಂತರವಾದೀತೋ ಎಂಬಂತೆ. ಸ್ವಲ್ಪ ಅಲ್ಲಿ ಇಲ್ಲಿ ಫೋಕಸ್ ಕಳೆದುಕೊಂಡರೂ ಕೊನೆಗೆ ಎಲ್ಲವೂ ತಂತಮ್ಮ ಜಾಗಗಳಲ್ಲಿ ಬೀಳುವ ಪಜ಼ಲ್ ತರಹ ಹೊಂದಾಣಿಕೆಯಾಗುತ್ತದೆ.
ನನಗೆ ಬಹಳ ಮೆಚ್ಚುಗೆಯಾಯಿತು. ಮತ್ತೆ ಮತ್ತೆ ಕೆಲವು ಅಧ್ಯಾಯಗಳನ್ನು ಮೆಲುಕು ಹಾಕಬೇಕಾದೀತು.
ಉತ್ತಮ ನಾನ್-ಫಿಕ್ಷನ್ ವರ್ಗದ ಮಾಹಿತಿಭರಿತ ಚಾರಿತ್ರಿಕ ಗ್ರಂಥ. ಅಂತಹಾ ಸನಾತನ ಧರ್ಮದ ಶ್ರೇಷ್ಟತೆ ಮತ್ತು ಕೀರ್ತಿಯ ಬಗ್ಗೆಯ ವಿಚಾರಗಳನ್ನು ಕೌತುಕತೆಯಿಂದ ಆಸಕ್ತಿಯಿಂದ ನೀವು ಓದುವವರಾಗಿದ್ದರೆ ಈ ಪುಸ್ತಕವನ್ನು ಕೊಂಡು ಓದಿ.
– ನಾಗೇಶ್ ಕುಮಾರ್ ಸಿ. ಎಸ್.